ಶುಕ್ರವಾರ, ಏಪ್ರಿಲ್ 10, 2009

ಏನ ಹೇಳಲಿ ನಾನು?




ಏನ ಹೇಳಲಿ ನಾನು
ಪಕ್ಕದ ಮನೆಯವರು
ನಮ್ಮನ್ನು ಚಹಾಕ್ಕೆ
ಕರೆಯಲು ಬಂದರೆ?

ಅವರಿಗೆ ಗೊತ್ತಿಲ್ಲ
ನನ್ನೊಂದಿಗೆ ನೀನಿಲ್ಲವೆಂದು.
ಏನ ಹೇಳಲಿ ನಾನು
ಫೋನು ರಿಂಗಣಿಸಿ
ಯಾರಾದರೂ ನಿನ್ನ ಕೇಳಿದರೆ?
ಅವರಿಗೆ ಗೊತ್ತಿಲ್ಲ ನಾನೂ
ಸಹ ನಿನ್ನ ಕೇಳುತ್ತಿದ್ದೇನೆಂದು.

ಏನ ಹೇಳಲಿ ನಾನು
ಯಾರಾದರು ನನ್ನ ಸುರಿಯುವ
ಕಣ್ಣೀರನ್ನು ನೋಡಿದರೆ?
ಹೇಗೆ ಹೇಳಲಿ ಅವರಿಗೆ
ನೀನಿಲ್ಲದೆ ನನ್ನ ಹೃದಯ
ನಿದುಸುಯ್ಯುತ್ತಿದೆ ಎಂದು?

ಏನ ಹೇಳಲಿ ನಾನು
ಯಾರಾದರು ನಿನ್ನ ಕೇಳಿದರೆ?
ಹೇಳಬಲ್ಲೆ ವಾರದ ಮಟ್ಟಿಗೆ
ಹೊರಗೆ ಹೋಗಿದ್ದೀಯ ಎಂದು.
ಆದರೆ ವಾರ ಕಳೆದ ಮೇಲೆ
ಏನ ಹೇಳಲಿ ನಾನು?

ಇಂಗ್ಲೀಷ ಮೂಲ: ಪೀಟರ್ ಟುಂಟರಿನ್
ಕನ್ನಡಕ್ಕೆ: ಉದಯ ಇಟಗಿ

ಶನಿವಾರ, ಏಪ್ರಿಲ್ 4, 2009

ಚೇತನಾ ತೀರ್ಥಹಳ್ಳಿ ಕಳುಹಿಸಿದ ತತ್ರಾನಿಯ ನೀರು ಕುಡಿಯ ಬನ್ನಿ ಹಕ್ಕಿಗಳೇ..


ಬೇಸಿಗೆ ದಾಳಿಯಿಟ್ಟಿದೆ. ಗಂಟಲೊಣಗಿ ದರಗಾಗುವ ಕಾಲವಿದು. ದಾಹ... ದಾಹ... ದಾಹ...ನಮಗೆ ಮಾತ್ರವಲ್ಲ...ಮನುಷ್ಯರಿಗಾದರೂ ಬಾಯಿಬಿಟ್ಟು ನೀರು ಕೇಳುವ ಅವಕಾಶವುಂಟು. (ಕೆಲವೆಡೆ ನೀರಿನ ವಿಷಯವಾಗಿ ವರ್ಗ ಸಂಘರ್ಷಗಳು ನಡೆದು ಮೇಲ್ಜಾತಿ ಅನಿಸಿಕೊಂಡವರು ಕೆಳಜಾತಿ ಎಂದು ಕರೆಯಲ್ಪಟ್ಟವರನ್ನು ತುಳಿದ, ಹೂತ, ಸುಟ್ಟ ಕೆಟ್ಟ ಘಟನೆಗಳೂ ಇವೆ ಬಿಡಿ... ಅದು ವಿಷಯಾಂತರ..)ಹಾ. ಮನುಷ್ಯರಿಗೆ ಎಲ್ಲಿಂದಲಾದರೂ ಹನಿ ನೀರು ಹೊಂಚಿಸಿಕೊಂಡು ಜೀವ ಉಳಿಸಿಕೊಳ್ಳುವ ಅವಕಾಶವುಂಟು... (ಮತ್ತೆ ಮನಸಿಗೆ ಹಿಂಸೆಯಾಗ್ತಿದೆ. ಸೋಮಾಲಿಯಾದ ಫೋಟೋಗಳನ್ನ ನೀವೂ ಮೇಲ್ ಗಳಲ್ಲಿ, ನೆಟ್ಟಿನಲ್ಲಿ ನೋಡಿ ಕಣ್ಣೊದ್ದೆ ಮಾಡ್ಕೊಂಡಿರಬಹುದು)
ಸರಿ. ಬಾಯ್ಬಿಟ್ಟು ಕೇಳಿ, ಹೇಗಾದರೂ ನೀರು ಹೊಂಚಿಕೊಂಡು ಕುಡಿಯುವ ಅವಕಾಶ ಮನುಷ್ಯರಿಗಿದೆ ಅಂತಲೇ ಇಟ್ಟುಕೊಳ್ಳೋಣ ಸಧ್ಯಕ್ಕೆ. ಆದರೆ ಪ್ರಾಣಿ ಪಕ್ಷಿಗಳಿಗೆ?ಲೆಕ್ಕಾಚಾರದ ಪ್ರಕಾರ ಸಾವಿರಕ್ಕೂ ಮೀರಿ ಪಕ್ಷಿಗಳು ದಾಹದಿಂದ ಬೇಸಿಗೆಯಲ್ಲಿ ಸಾವಪ್ಪುತ್ತವೆಯಂತೆ. ಮೊದಲಾದರೆ ಕಂಡಲ್ಲಿ ನೀರ ಹೊಂಡಗಳು ಇರುತ್ತಿದ್ದವು. ನಾವೀಗ ಅವನ್ನು ನಮಗೂ ಉಳಿಸಿಕೊಂಡಿಲ್ಲ, ಇತರ ಜೀವಿಗಳಿಗೂ ಉಳಿಸಿಕೊಟ್ಟಿಲ್ಲ.ಪಾಪಕ್ಕೆ ಪ್ರಾಯಶ್ಚಿತ್ತ ಬೇಡವೇ?
ಪ್ಲೀಸ್, ನಿಮ್ಮ ಮನೆ ಬಾಲ್ಕನಿಯಲ್ಲೋ, ತಾರಸಿಯ ಮೇಲೂ, ಕಾಂಪೌಂಡಿನ ತುದಿಯಲ್ಲೋ ಅಗಲ ಬಾಯಿಯ ಮಡಿಕೆ ತುಂಬ ನೀರು ತುಂಬಿಡಿ. ಸಾಧ್ಯವಿದ್ದಷ್ಟೂ ಮನುಷ್ಯರ ಗದ್ದಲವಿರದ ಕಡೆ ಇಡಲು ಯತ್ನಿಸಿ. ಮನುಷ್ಯನಿಗೆ ಹೆದರುವ ಹಕ್ಕಿಗಳು ನೀರು ಕಂಡೂ ಕುಡಿಯದಂತಾಗೋದು ಬೇಡ.
ಮನುಕುಲ, ಸಹಜೀವಿಗಳಿಗೆ ಭರಿಸಲಾಗದ ಅನ್ಯಾಯವೆಸಗಿದೆ. ನಮ್ಮ ಪಾಪ ಸಾಗರಕ್ಕೆ ದಿನಕ್ಕೊಂದು ಮಡಿಕೆ ನೀರು ಹನಿಲೆಕ್ಕದ ಪ್ರಾಯಶ್ಚಿತ್ತವಾಗಬಲ್ಲದು.ಅದಕ್ಕೇ,ಒಂದೇ ಒಂದು ಮಡಿಕೆ ನೀರು-ಹಕ್ಕಿಗಳಿಗಾಗಿ ತುಂಬಿಡೋಣ. ಆಗದೇ?

ಬುಧವಾರ, ಏಪ್ರಿಲ್ 1, 2009

ಸನಾತನವಾದಿ ಸಂಸದ ಹೆಗಡೆಗೆ ಸವಾಲು

ಬಿಜೆಪಿ ಮುಖಂಡ ಹಾಗೂ ಸಂಸದ ಅನಂತಕುಮಾರ ಹೆಗಡೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಸಮಾಜ ಮಂದಿರದಲ್ಲಿ ಭಾನುವಾರ (29.3.2009) ನಡೆದ ಕಾರ್ಯಕರ್ತರ ಸಭೆಯಲ್ಲಿ 'ನನಗೆ ಹಿಂದೂಗಳ ಮತವೇ ಸಾಕು' ಎಂದು ಘೋಷಿಸುವ ಮೂಲಕ ಬಿಜೆಪಿಯ ಹಿಡನ್ ಅಜೆಂಡಾವನ್ನು ಬಹಿರಂಗಗೊಳಿಸಿದ್ದಾರೆ. ಈ ಹೇಳಿಕೆಗೆ ತಾವು ಬದ್ಧ ಅಷ್ಟೆ ಅಲ್ಲ; ಚುನಾವಣಾ ಆಯೋಗ ಬೇಕಿದ್ದರೆ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಿ ಎಂದೂ ಸವಾಲು ಹಾಕಿರುವುದು ಬಹುಸಂಖ್ಯಾತ ಮನುಷ್ಯತ್ವವಾದಿಗಳು ತಲೆತಗ್ಗಿಸುವಂತಾಗಿದೆ. ಇಂಡಿಯಾದ ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಗೇ ಹೆಗಡೆ ಮಾತು ಅಪಚಾರ. ಬಹು ಧಮರ್ೀಯರು 'ಭಾಯಿ-ಭಾಯಿ' ಎಂದು ಭಾವೈಕ್ಯತೆಯಿಂದ ಬದುಕುವ ದೇಶದಲ್ಲಿ ಹೆಗಡೆ ಸೇರಿದಂತೆ ಅನೇಕ ಮನುಷ್ಯ ವಿರೋಧಿ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಕಿಚ್ಚು ಹೊತ್ತಿಸಿ ಶಾಂತಿ ಭಂಗಕ್ಕೆ ಕಾರಣವಾಗಿರುವುದು ಸ್ಪಷ್ಟ. ಸೌಹಾರ್ದತೆಯ ತಾಣವಾದ ಇಂಡಿಯಾದಲ್ಲಿ ಹೆಗಡೆಯಂತವರು ವಾಸಿಸುವ ಹಕ್ಕನ್ನೇ ಪ್ರಶ್ನಿಸಬೇಕಾಗುತ್ತದೆ. ಅದೇ ಸಭೆಯಲ್ಲಿ ಮುಂದುವರೆದು ಮಾತನಾಡಿ, 'ಅಲ್ಪಸಂಖ್ಯಾತರ ಮತಕ್ಕಾಗಿ ಕೆಲವರು ಅವರನ್ನು ತುಷ್ಟೀಕರಣ ಮಾಡುವುದಾದರೆ, ನಾನು ಬಹುಸಂಖ್ಯಾತರಿಗಾಗಿ ರಾಜಕಾರಣ ಮಾಡುತ್ತೇನೆ. ಶ್ರೀರಾಮನಿಗೋಸ್ಕರ, ಶ್ರೀಕೃಷ್ಣನಿಗೋಸ್ಕರ ರಾಜಕಾರಣ ಮಾಡುತ್ತೇನೆ' ಎಂದಿರುವುದೂ ಅವರ ಕಹಿ ಮನಸ್ಸು ಮತ್ತು ಭಾವನೆಗಳಿಗೆ ಸಾಕ್ಷಿ. ನಿಜ, ಹೆಗಡೆಯಂತವರು ರಾಜಕಾರಣ ಮಾಡುವುದು, ಅವರೇ ಒಪ್ಪಿಕೊಂಡಂತೆ, ಶ್ರೀರಾಮನಿಗೋಸ್ಕರ ಮತ್ತು ಶ್ರೀ ಕೃಷ್ಣನಿಗೋಸ್ಕರ. ಅಂತವರಿಗೆ ಕಲ್ಲು, ಕಟ್ಟಿಗೆಗಳಲ್ಲಿ ಕಾಣುವ ಶ್ರೀರಾಮ, ಶ್ರೀಕೃಷ್ಣರೇ ಹೆಚ್ಚು. ಹಾದಿ-ಬೀದಿ, ಊರು-ಕೇರಿಗಳಲ್ಲಿ ತೀರಾ ಸಾಮಾನ್ಯವಾಗಿ, ದಯನೀಯ ಸ್ಥಿತಿಯಲ್ಲಿ ಬದುಕುವ ರಾಮನಾಗಲಿ ಕೃಷ್ಣನಾಗಲಿ ಕಾಣುವುದಿಲ್ಲ. ಹರಕು-ಮುರುಕು ಗುಡಿಸಲುಗಳಲ್ಲಿ ವಾಸಿಸುವ ಹಾಗೆಯೇ ತಮ್ಮಂತೆ ಉಸಿರಾಡುವ ಕೋಟ್ಯಾನುಕೋಟಿ ರಾಮ, ಕೃಷ್ಣರಿಗೆ ಒಂದು ಸೂರು ಮಾಡಿಕೊಡಬೇಕೆಂಬ ಖಬರು ಇರುವುದಿಲ್ಲ. ವೈರುಧ್ಯದ ಹಾಗೂ ಕಾಲ್ಪನಿಕ ಪಾತ್ರಗಳೆನಿಸಿಕೊಂಡ ಶ್ರೀರಾಮಚಂದ್ರ ಮತ್ತು ಶ್ರೀಕೃಷ್ಣ ಪರಮಾತ್ಮರ ಪರವಾಗಿ ತಾವು ರಾಜಕಾರಣ ಮಾಡುವುದು. ಅವರಿಗಾಗಿ ಕೋಟ್ಯಂತರ ರೂಪಾಯಿ ಖಚರ್ುಮಾಡಿ ಗುಡಿ, ಗುಂಡಾರ, ಮಂದಿರ ನಿಮರ್ಿಸುತ್ತೇವೆ. ಕೇವಲ ಸಿಕ್ಕ ಜಾಗೆಯಲ್ಲೆ ತಮ್ಮ ಆರಾಧ್ಯದೈವಗಳಿಗೆ ಮಂದಿರ ಕಟ್ಟುವುದಿಲ್ಲ. ಕೆಡುವುದೂ ತಮ್ಮ ಹುಟ್ಟುಗುಣ ಎಂಬಂತೆ ಮಸೀದಿ, ಚಚರ್ುಗಳನ್ನೂ ಕೆಡವಿ ಸೌಹಾರ್ದತೆಯ ಬಾಳಿಗೆ ಹುಳಿ ಹಿಂಡಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜಾಯಮಾನ ತಮ್ಮದು ಎಂಬ ಅವರ ಅಭಿಮಾನ ತೀರಾ ನಾಚಿಕೆಗೇಡಿತನದ್ದು. ಅವರು ರಾಜಕಾರಣಿಯಾಗಿರುವುದು ಯಾವ ದೇಶದಲ್ಲಿ. ರಾಜಕಾರಣಿಯಾಗಲಿಕ್ಕೆ, ಸಂಸದರಾಗಿ ಆಯ್ಕೆಯಾಗುವುದಕ್ಕೆ ಯಾವ ದೇಶದ ಸಂವಿಧಾನ, ಪ್ರಜಾತಂತ್ರ ವ್ಯವಸ್ಥೆ, ಕಾಯ್ದೆ, ಕಾನೂನುಗಳು ಒಪ್ಪಿಗೆ ನೀಡಿವೆ ಎಂಬುದನ್ನು ಮನಗಾಣಬೇಕು. ಕೆಲವರು ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದ್ದು, ತಾವು ಬಹುಸಂಖ್ಯಾತರನ್ನು ಓಲೈಸಿದರೆ ತಪ್ಪೇನು ಎಂದು ಹೆಗಡೆ ಮೂರೂ ಬಿಟ್ಟು ಕೇಳಿರುವುದು ಹಾಸ್ಯಾಸ್ಪದ. ಯಾರು ಈ ದೇಶದಲ್ಲಿ ಅಲ್ಪಸಂಖ್ಯಾತರು? ದೇಶದ ಪ್ರತಿ ನಾಗರಿಕನೂ ಈ ದೇಶದ ಹೆಮ್ಮೆಯ ಪುತ್ರ / ಪುತ್ರಿ. ದೇಶದ ಸಂವಿಧಾನ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಿರುವಾಗ ಎಲ್ಲಿಯದು ಈ ಭಿನ್ನ ಭೇದ ಮಾತು. ಕನರ್ಾಟಕದಲ್ಲಿ ಗುಜರಾತ ಮಾದರಿ ಅಭಿವೃದ್ಧಿ ಸಾಧಿಸುವುದಾಗಿ ಹೇಳಿಕೊಂಡೇ ಅಧಿಕಾರಗ್ರಹಣಮಾಡಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸಕರ್ಾರ ಎಲ್ಲಾ ಅನಾಚಾರ, ಅಪಚಾರದ ಕೆಲಸಗಳನ್ನು ಶಕ್ತಿಮೀರಿ ಮಾಡುವಲ್ಲಿ ಯತ್ನಿಸುತ್ತಿರುವುದು ಎಲ್ಲರ ಅನುಭವಕ್ಕೆ ಬಂದಿದೆ. ಜಾತಿ, ಧರ್ಮ, ಭಾಷೆ, ಉಡುಗೆ, ತೊಡುಗೆ, ಬಟ್ಟೆ, ಬರೆ, ಭೌತಿಕ ಆಕಾರ, ಬಿಟ್ಟ ಕೂದಲುಗಳನ್ನೇ ಭಿನ್ನ ಭೇದಕ್ಕೆ ಮಾನದಂಡಗಳನ್ನಾಗಿ ಬಳಸುತ್ತಿರುವುದು ಯಾವುದೇ ನಾಗರಿಕ ಸಮಾಜಕ್ಕೆ ಒಪ್ಪುವುದಲ್ಲ. ಕೇವಲ ಅಧಿಕಾರ, ಪ್ರಭಾವ, ಗೂಂಡಾಗಿರಿ ಪ್ರಯೋಗಿಸಿ ಜನರಲ್ಲಿ ಭಯ ಭೀತಿ ಹುಟ್ಟಿಸಿ ತಾತ್ಕಾಲಿಕ ಯಶಸ್ಸು ಗಳಿಸಿದರೂ ಅದಕ್ಕೆ ಮನುಷ್ಯತ್ವದಡಿ ಬೆಲೆಯಿರದು. ಹೆಗಡೆ ಮತ್ತವರ ಬಳಗ ಬಾಯಿಬಿಟ್ಟರೆ ಸಾಕು ತಾವು ಹಿಂದೂಪರವಾದಿಗಳು ಎಂದು ಬಡಬಡಿಸುತ್ತಿರುವುದರ ಬಗ್ಗೆ ಕೆಲವು ಅಂತರಾಳದ ಮಾತುಗಳು. ಹಿಂದೂ ಎಂದರೆ ಏನು? ಹಿಂದೂ ಎಂಬುದು ಒಂದು ಧರ್ಮವೇ? ಹಿಂದೂ ಎಂಬುದು ಒಂದು ಜನಾಂಗವೇ ಇಲ್ಲಾ ಒಂದು ಜಾತಿಗೇ ಸೀಮಿತವಾದುದೇ? ಎಲ್ಲವೂ ಗೊಂದಲದ ಸಂಗತಿಗಳೇ. ಇದಕ್ಕೆಲ್ಲಾ ಹೆಗಡೆಯಂತವರು ತಾತ, ಮುತ್ತಾತನ ಕಾಲದಲ್ಲೇ ತಮಗೆ ಬೇಕಾದಂತೆ ಬರೆದುಕೊಂಡ ಸನಾತನ ಹೊತ್ತಿಗೆಗಳನ್ನೊ ಇಲ್ಲಾ ತಾಳೆಗರಿ ಓಲೆಗಳನ್ನೊ ಇಲ್ಲಾ ಮತ್ತಿನ್ನಿನೋ ತೋರಿಸಬಹುದು. ಇವತ್ತು ಬಿಜೆಪಿ ಮತ್ತು ಇತರೆ ಕೆಲವು ಪಕ್ಷಗಳು ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ರೀತಿಯಲ್ಲಿ ಧಮರ್ಾಂಧತೆ, ಮತಾಂಧತೆಗೆ ಬೆಲೆ ನೀಡುತ್ತಿರುವುದೂ ಮುಂದೊಂದು ದಿನ ಶಾಸನವಾಗಿಯೊ ಇಲ್ಲಾ ಒಪ್ಪಿತ ಸಿದ್ಧಾಂತಗಳೆಂದೊ ತಿಳಿಯಬೇಕಾದೀತು! ಒಂದು ಮಾತನ್ನು ತೀರಾ ಸ್ಪಷ್ಟ ಹಾಗೂ ಅರ್ಥವಾಗುವ ರೀತಿಯಲ್ಲಿ ಹೇಳಬೇಕೆಂದರೆ, ಈ ದೇಶದ ಯಾವ ದಲಿತರು, ಪರಿಶಿಷ್ಟ ಜಾತಿ, ಜನಾಂಗಗಳ ಜನರು, ಹಿಂದುಳಿದವರು, ಬಡವರು, ಅಸಹಾಯಕರು, ದುಡಿಯುವ ವರ್ಗ, ರೈತರು, ಕಾಮರ್ಿಕರು, ಎಲ್ಲಾ ಮಹಿಳೆಯರು, ಲಿಂಗಾಯತರು, ಒಕ್ಕಲಿಗರು, ಕುರುಬರು, ಬೇಡರು, ದೀನರು ಒಟ್ಟಾರೆ ತೀರಾ ಈ ದೇಶದ ತೊಂಬತ್ತೈದರಷ್ಟು ಜನ ಮಾನಸಿಕವಾಗಿ ಹಿಂದೂಗಳಲ್ಲ ಎಂದೇ ತಿಳಿದಿದ್ದಾರೆ. ಭೌತಿಕವಾಗಿಯೂ ಹಿಂದೂಧರ್ಮದ ಕಟ್ಟುಪಾಡುಗಳು, ಪೂಜೆ, ಪುನಸ್ಕಾರಗಳು, ಕಾಣಿಕೆ, ಬಲಿ, ಹರಕೆ, ನೀತಿಗೆಟ್ಟ ನಿಯಮಗಳು, ಅಸಮಾನತೆಯ ತತ್ವಗಳು, ಮನುಷ್ಯರಲ್ಲೆ ಪುರುಷರು ಮತ್ತು ಮಹಿಳೆಯರ ಮಧ್ಯೆ ಕಂದಕ ಸೃಷ್ಟಿಸುವ ಆಚರಣೆಗಳು, ಒಟ್ಟಾರೆ ಕೇವಲ ಒಂದೇ ಒಂದು ಜಾತಿಯ ಜನ ಹಿಂದೂ ಧರ್ಮವನ್ನು ಪಾಲಿಸುತ್ತಿರುವುದು. ಅವರು ಮಾತ್ರ ಹಿಂದೂಗಳು. ಅವರಲ್ಲೂ ಕೆಲವರು ತಾವು ಹಿಂದೂಗಳಲ್ಲ, ಹಾಗೆ ಕರೆಯಿಸಿಕೊಳ್ಳುವುದರಿಂದ ಈ ದೇಶದ ಸಾರ್ವಭೌಮತೆಗೆ ಧಕ್ಕೆ ತರಬೇಕಾಗುತ್ತದೆ ಎಂದೇ ಭಾವಿಸಿರುವ ಸೂಕ್ಷ್ಮ ಮನಸ್ಸಿನವರೂ ಇದ್ದಾರೆ. ಆದರೆ ಹೆಗಡೆಯಂತವರಿಗೆ ಹಿಂದೂ ಮತಗಳು ಬೇಕು. ಅಲ್ಪಸಂಖ್ಯಾತರು ಈ ದೇಶವಾಸಿಗಳಲ್ಲ ಅವರ ಪ್ರಕಾರ. ಈ ಸೋ ಕಾಲ್ಡ್ ಹಿಂದೂಗಳು ಈ ದೇಶದವರಲ್ಲವಲ್ಲ. ಹಾಗೆ ಅವರೇ ವಿವಿಧ ಧರ್ಮಶಾಸ್ತ್ರಗಳು, ಇತಿಹಾಸದಲ್ಲಿ ಬರೆದಿರುವುದನ್ನು ಓದಿ ನಾನು ತಿಳಿದುಕೊಂಡಿದ್ದು. ಹೆಗಡೆಯಂತಾ ಹಿಂದೂಗಳು ಆರ್ಯರೆಂದು ಅವರು ಮಧ್ಯ ಏಷ್ಯಾದಿಂದ ಇಂಡಿಯಾಕ್ಕೆ ವಲಸೆ ಬಂದವರೆಂದು ಇತಿಹಾಸದ ದಾಖಲೆಗಳು ತಿಳಿಸುತ್ತವೆ. ಅನ್ಯ ದೇಶದಿಂದ ಬಂದ ಮುಸ್ಲಿಂರು, ಕ್ರಿಶ್ಚಿಯನ್ನರು ಆಕ್ರಮಣಶೀಲ ನೀತಿ ಅನುಸರಿಸಿದರು ಎಂದು ಇಂತಹ ಹಿಂದೂವಾದಿಗಳು ಮೇಲಿಂದ ಬಡಬಡಿಸುತ್ತಾರೆ. ಇಂಡಿಯಾಕ್ಕೆ ವಲಸೆ ಬಂದ ಆರ್ಯನ್ನರು ಅಂದರೆ ಇಂದಿನ 4-5ರಷ್ಟು ಇರುವ ಸೋ ಕಾಲ್ಡ್ ಹಿಂದೂಗಳು ಇಂಡಿಯಾದ ಮೂಲನಿವಾಸಿಗಳಾದ ದ್ರಾವಿಡರ ಮೇಲೆ ಆರಂಭದಿಂದ ಇಲ್ಲಿಯವರೆಗೆ ಅನುಸರಿಸುತ್ತಿರುವುದು ಆಕ್ರಮಣಶೀಲ ನೀತಿಯಲ್ಲದೆ ಮತ್ತೇನು? ಆಯ್ತು ಹೆಗಡೆಯವರೆ, ನಿಮ್ಮ ಹಿಂದೂಪರವಾದವನ್ನು ಮತ್ತಷ್ಟು ಪ್ರಶ್ನಿಸಲಾರೆ. ತಾವಂತೂ ಹಿಂದುಗಳು. ತಮಗೆ ರಾಮ-ಕೃಷ್ಣರಷ್ಟೇ ಮನು ಋಷಿಯೂ ಆ ಪುಣ್ಯಾತ್ಮ ಬರೆದ ವಿಕೃತಸ್ಮೃತಿಯೂ ನಿಮ್ಮ ಪಾಲಿಗೆ ಪರಮ ಪವಿತ್ರ. ಮನುಷ್ಯತ್ವವನ್ನೇ ಬೋಧಿಸದ, ಬ್ರಾಹ್ಮಣರನ್ನು ಬಿಟ್ಟು ಉಳಿದವರನ್ನು ಮನುಷ್ಯರೇ ಅಲ್ಲ ಎಂದು ಘಂಟಾಘೋಷವಾಗಿ ಸಾರಿದ ಮನುಸ್ಮೃತಿ ನಿಮ್ಮಂತವರ ಹಿಂದುತ್ವವಾದಕ್ಕೆ ತಳಹದಿ. ಮಹಿಳೆಯರನ್ನು, ದುಡಿಯುವ ವರ್ಗವನ್ನೇ ಧಿಕ್ಕರಿಸುವ, ದಲಿತರು, ದೀನರು, ಅಸಹಾಯಕರನ್ನು ಪಶುಗಳಿಗಿಂತ ಕೀಳೆಂದು ಭಾವಿಸುವ ಮನುಸ್ಮೃತಿಯೇ ನಿಮ್ಮ ಬಿಜೆಪಿಯ ಹಿಡನ್ ಅಜೆಂಡಾದಲ್ಲಿ ಕೆಲವು ಸಾಲುಗಳಲ್ಲಿ ಮರುರೂಪ ಪಡೆದಿರಲೂಬಹುದು. ಹೀಗೆ ಮನುಷ್ಯತ್ವವನ್ನೇ ಧಿಕ್ಕರಿಸುವ, ಮನುಷ್ಯರನ್ನು ಪ್ರೀತಿಸದ ಹಿಂದೂ ಧರ್ಮ ತಮ್ಮದೆಂದು ಹೇಳಿಕೊಳ್ಳುವಲ್ಲಿ ಅದಕ್ಕೇ ಬಹುಸಂಖ್ಯಾತ ಜನಸಾಮಾನ್ಯರಿಗೆ ಹೇಸಿಕೆ ಅನ್ನಿಸುತ್ತಿರುವುದು. ನಿಮಗೆ ಕೇವಲ ಹಿಂದೂಗಳ ಮತಗಳು ಸಾಕು ಎಂದು ಹೇಳಿರುವುದಕ್ಕೆ ಒಪ್ಪಿಗೆಯಿದೆ. ಜನರಿಗೆ ನಿಮ್ಮ ಹಿಡನ್ ಅಜೆಂಡಾದಲ್ಲಿರುವ ಮನುಷ್ಯತ್ವ ವಿರೋಧಿ ನಿಲುವುಗಳನ್ನು ಬಹಿರಂಗಗೊಳಿಸಿ ಮತಯಾಚಿಸಿ ಆಗ ಜನ ನಿಮ್ಮನ್ನು ಹೇಗೆ ಸ್ವಾಗತಿಸುತ್ತಾರೆ ಎಂಬುದು ಅರ್ಥವಾಗುತ್ತದೆ. ಹೆಗಡೆಯವರೆ, ಚುನಾವಣಾ ಆಯೋಗಕ್ಕೆ ನೀವು ಸವಾಲು ಹಾಕಿದಂತೆ ನಿಮಗೂ ಒಂದೂ ಸವಾಲು ಹಾಕುತ್ತಿದ್ದೇನೆ. ಸೋ ಕಾಲ್ಡ್ ಹಿಂದೂಗಳ ಬಳಿ ಹೋಗಿ ನೀವು ಮತಯಾಚಿಸಿ. ಅವರು ನಿಮಗೂ ಗೊತ್ತಿರುವಂತೆ ಶೇ.30-35ರಷ್ಟು ಜನ ಮಾತ್ರ ಮತಗಟ್ಟೆಗೆ ಬರುವುದು, ಓಟು ಹಾಕುವುದು. ಬೆರಳೆಣಿಕೆಯ ಪ್ರತಿಶತ ಜನಸಂಖ್ಯೆ ಹೊಂದಿರುವ ಸೋಕಾಲ್ಡ್ ಹಿಂದೂಗಳಿಂದ ತಾವು ಮತ ಹಾಕಿಸಿಕೊಂಡು ಗೆಲ್ಲುವಿರಾದರೆ ನಿಮ್ಮ ಹೇಳಿಕೆಗೂ ಅರ್ಥ ಬರುತ್ತದೆ. ನಿಮಗೆ ಎಷ್ಟು ಸಾವಿರ ಮತಗಳು ಬರುತ್ತವೆ ಎಂಬುದನ್ನು ತಿಳಿಯಲು ನನಗೂ ಭಾರಿ ಕುತೂಹಲ. ಆದರೆ 'ಹಿಂದೂಪರ' ಎಂಬ ಮುಖವಾಡ, ಅಲ್ಪಸಂಖ್ಯಾತರನ್ನು ತೆಗಳಿ, ಜನರಲ್ಲಿ ಸಿಟ್ಟು, ವೈರತ್ವ, ದ್ವೇಷ ಉಕ್ಕಿಸುವ ರೀತಿಯಲ್ಲಿ ಮಾತನಾಡದೆ ನೇರವಾಗಿ ನಿಮ್ಮನ್ನು ಪೊರೆಯುವ ನಿಮ್ಮಂತೆಯೇ ಮಧ್ಯ ಏಷ್ಯಾದಿಂದ ವಲಸೆ ಬಂದ ಆರ್ಯರೆನ್ನಿಸಿಕೊಳ್ಳುವ ಇಂಡಿಯಾದ ಮೂಲನಿವಾಸಿಗಳೂ ಅಲ್ಲದ ಸೋ ಕಾಲ್ಡ್ ಹಿಂದೂಗಳ ಮತಗಳಷ್ಟೇ ನಿಮಗೆ ದೊರೆಯಲಿ. ನಿಮ್ಮಂತಾ ಮನುಷ್ಯವಿರೋಧಿ ಜನಕ್ಕೆ ಧಿಕ್ಕಾರವಿರಲಿ. ನಿಮ್ಮ ನಾಲಿಗೆ, ವರ್ತನೆಗೆ ಕಡಿವಾಣ ಹಾಕುವಷ್ಟು ದೇಶದ ಕಾನೂನು, ಕಾಯ್ದೆ, ಸಂವಿಧಾನ, ವ್ಯವಸ್ಥೆ ದಿಟ್ಟತನ ತೋರಲಿ.
-ಕಲಿಗಣನಾಥ ಗುಡದೂರು

ಭಾನುವಾರ, ಮಾರ್ಚ್ 29, 2009

ಕನ್ನಡಪ್ರಭ ಪತ್ರಿಕೆ ಸಾಪ್ತಾಹಿಕ ಪ್ರಭ (29.03.2009)ದ 'ಸನ್ನಿಧಾನ'ದಲ್ಲಿ ವಿದ್ಯಾರಶ್ಮಿ ನಡೆಸಿದ ಕಿರು ಸಂದರ್ಶನ

ನೀವೇಕೆ ಬರೆಯುತ್ತೀರಿ? ನಿಮ್ಮ ಸಾಹಿತ್ಯ ರಚನೆಗೆ ಸ್ಫೂತರ್ಿ ಏನು?
- ಬರೆಯುವುದು ಕೇವಲ ಹವ್ಯಾಸ ಅನ್ನಿಸಲ್ಲ. ತುಡಿತ ಮತ್ತು ಕುದಿವ ಭಾವನೆಗಳ ಅಕ್ಷರ ಹಾಗೂ ಓದಲು, ಚಚರ್ಿಸಲು ಬರುವ ರೂಪ. ಸಾಮಾಜಿಕ ಜವಾಬ್ದಾರಿ. ಕಲಿತ ಅಕ್ಷರ ಓದಲು ಬರೆಯಲು ನೌಕರಿ ಹಿಡಿಯಲಷ್ಟೆ ಅಲ್ಲವಲ್ಲ. ಸುತ್ತಲಿನ ಹಲವು ಸಂಗತಿಗಳು ಮತ್ತು ಜಗದ ಜಂಜಡ ಹಾಗೂ ಸವಾಲುಗಳಿಗೆ ಪ್ರತಿಕ್ರಿಯಿಸುವ ಹಂಬಲ. ಮನೆ, ತಂದೆ, ತಾಯಿ, ಅಕ್ಕ, ಊರು, ಹೊಲ, ಗದ್ದೆ, ದುಡಿಯುವ ಜನ, ಜಗತ್ತನ್ನು ಕಾಡುತ್ತಿರುವ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳು ತಂದೊಡ್ಡಿರುವ ಬಗೆಹರಿಸಲಾಗದ ತೊಂದರೆಗಳು ಅಸಹಾಯಕ ಸಕರ್ಾರಗಳು, ನಿರ್ಲಜ್ಜ ರಾಜಕಾರಣಿಗಳು, ಸೊಫಿಸ್ಟಿಕೇಟಡ್ ಬದುಕಿಗೆ ಜೋತುಬಿದ್ದು ಮನುಷ್ಯತ್ವ ಮರೆತ ಜನ, ದೇವರು, ಧರ್ಮ, ಜಾತಿ, ಭಾಷೆ, ಪ್ರಾಂತೀಯತೆ ಹಂಗಿನಿಂದ ಕಂಗೆಟ್ಟ ಜಗತ್ತು, ಹೀಗೆ ಹಲವು ಸಂಗತಿಗಳು ಸಾಹಿತ್ಯ ರಚನೆಗೆ ಸ್ಫೂತರ್ಿ. ಹಿಂದೆಂದಿಗಿಂತ ಇಂದು ಸಾಹಿತ್ಯ ರಚನೆಗೆ ಸ್ಫೂತರ್ಿಯ ಹಲವು ಸಂಗತಿಗಳು ಹೆಚ್ಚುತ್ತಿವೆ.
ಮೊದಲ ಕಥೆ / ಕವನ ಪ್ರಕಟವಾದ ನೆನಪು....
- ಪಿಯುಸಿಯಿಂದಲೇ ಸಾಹಿತ್ಯ ಓದುವ ಹುಚ್ಚು ಬೆಳೆಯಿತು. ಬಿ.ಎ. ಓದುತ್ತಿದ್ದಾಗ ಕೆಲವು ಕಥೆಗಳನ್ನು ಬರೆದನಾದರೂ ಪ್ರಕಟಣೆಗೆ ಕಳಿಸಿದ ಕಥೆಗಳು ವಿಷಾದದ ಪತ್ರ ಹೊತ್ತು ಬಂದು ನಿನಗೆ ಕಥೆ ಬರೆಯಲು ಬರುವುದಿಲ್ಲ ಎಂದೇ ಹೀಯಾಳಿಸಿದವು. ಅದೇ ಕಥೆಗಳನ್ನು ಸಾಮಾನ್ಯ ಪ್ರಕಟಣೆಗೆ ಕಳುಹಿಸದೆ ಕಥಾಸ್ಪಧರ್ೆಗೆ ಕಳಿಸಿದೆ. ಪ್ರಜಾವಾಣಿ ದೀಪಾವಳಿ ಕಥಾಸ್ಪಧರ್ೆ-1997ರಲ್ಲಿ ವಿದ್ಯಾಥರ್ಿ ವಿಭಾಗಕ್ಕೆಂದು ಉಡಿಯಲ್ಲಿಯ ಉರಿ ಕಥೆ ಕಳಿಸಿದೆ. ಬಹುಮಾನ ಕುರಿತು ಗೆಳೆಯನೊಬ್ಬ ಸುದ್ದಿಮುಟ್ಟಿಸಿದ. ವಿದ್ಯಾಥರ್ಿ ವಿಭಾಗದಲ್ಲಿ ಬಹುಮಾನ ಬಂದಿರಬೇಕೆಂದೇ ತಿಳಿದಿದ್ದೆ. ಆದರೆ ಸಾರ್ವಜನಿಕ ವಿಭಾಗದ ಕಥೆಗಳೊಂದಿಗೆ ಸ್ಪಧರ್ಿಸಿದ ಕಥೆಗೆ ಮೊದಲ ಬಹುಮಾನ. ಅಬ್ಬಾ ಆ ದಿನ ಸಂಭ್ರಮಿಸಿದ ಕ್ಷಣಗಳು ಈಗಲೂ ಹಚ್ಚಹಸಿರು. ಬೆಟ್ಟದಷ್ಟು ಸಂತಸ, ಸಡಗರ ಅನ್ನಿಸಿದರೂ ಮುಂದಿರುವ ಹಾದಿ ಬಗ್ಗೆ ಆತಂಕ ಕಾಡುತ್ತಿತ್ತು. ಕರ್ಮವೀರದಲ್ಲಿ ಬಿ.ಎ. ಓದುತ್ತಿದ್ದಾಗ ಬರೆದ ಮಕ್ಕಳ ಕವನ ಪ್ರಕಟವಾದಾಗ ಆ ಸಂಚಿಕೆ ಹಿಡಿದು ಗುಡದೂರು ತುಂಬಾ ಓಡಾಡಿ ನನ್ನ ಗೆಳೆಯರಿಗೆ ತೋರಿಸಿ, ಸಂಭ್ರಮಿಸಿದ್ದೆ....
ನಿಮ್ಮ ಕಥೆಗಳಿಗೆ ಕಾಣಿಸುವ ಉರಿಗೆ ಕಾರಣ ಏನು?
-ಬರೆದ 30 ಕಥೆಗಳಲ್ಲಿ ಒಂದಲ್ಲ ಒಂದು ರೀತಿಯಿಂದ ಕಾಣಿಸಿಕೊಳ್ಳುವ ಉರಿಗೆ ಕಾರಣವೆಂದರೆ, ನನ್ನದು ತೀರಾ ಬಡತನದ ಕುಟುಂಬ. ಬಡತನದಲ್ಲೆ ಕಷ್ಟ ನಷ್ಟ ಅನುಭವಿಸಿ ಬೆಳೆದ ನನಗೆ ಸುತ್ತ ಕಂಡಿದ್ದೆ ಉರಿಯಂತಾ ಅನುಭವಗಳು, ಭಾವನೆಗಳು, ಸವಾಲುಗಳು, ಅವುಗಳೇ ಕಥೆಯಲ್ಲಿ ಜಾಗೆ ಪಡೆದವು. ಇವತ್ತಿಗೂ ಉತ್ತಮವಾಗಿ ಬದುಕುವ ಅವಕಾಶವಿದ್ದರೂ ಯಾಕೊ ಮನಸ್ಸು ಒಪ್ಪುತ್ತಿಲ್ಲ. ನಿತ್ಯವೂ ನನಗೆ ಸವಾಲುಗಳಿರಬೇಕು. ಸವಾಲು ಎದುರಿಸಲು ಹೆಣಗಾಡಬೇಕು. ಸುಖಾ ಸುಮ್ಮನೆ ಬದುಕು ನಡೆಸಲು ಯಾಕೊ ಬಲು ಬೇಜಾರು. ನನಗೆ ಸೂಸುವ ತಂಗಾಳಿಯಲ್ಲೂ ಉರಿಯೂ ಕಾಣಿಸಿಕೊಳ್ಳುತ್ತದೆ. ಜಗತ್ತಿನಲ್ಲಿ ಇವತ್ತು ಉರಿಯಲ್ಲದೆ ಮತ್ತೇನು ಕಾಣಲು ಸಾಧ್ಯ.
ನಿಮಗಿಷ್ಟವಾದ / ನಿಮ್ಮ ಮೇಲೆ ಪ್ರಭಾವ ಬೀರಿದ ಕೃತಿ?
- ಬಿ.ಎ. ಓದುತ್ತಿದ್ದಾಗ ಗ್ರಂಥಪಾಲಕ ಗುರು ಅಮರೇಶ ಕುಂಬಾರ ನನ್ನ ಓದಿನ ಹಂಬಲವನ್ನು ಬಹು ಪೋಷಿಸಿದರು. ನೆಚ್ಚಿನ ಕಥೆಗಾರ ಕುಂವಿಯವರ ಕಪ್ಪು ಕಾದಂಬರಿ ಈಗಲೂ ನನ್ನನ್ನು ಬಹು ಕಾಡುತ್ತಿರುವ ಹಾಗೂ ಇಷ್ಟದ ಕೃತಿ. ಅಲ್ಲಿ ತೆರೆದುಕೊಳ್ಳುವ ಜಗತ್ತು ನನ್ನ ಸುತ್ತಲಿನ ಪರಿಸರಕ್ಕೂ ವ್ಯತ್ಯಾಸ ಎನಿಸಲಿಲ್ಲ. ಆರಂಭದ ಓದು ಮತ್ತು ಬರೆಹಕ್ಕೆ ದಾರಿಮಾಡಿಕೊಟ್ಟಿತು. ಇದರ ಜೊತೆಗೆ ಕುಂವಿ ಸೇರಿದಂತೆ, ಲಂಕೇಶ, ಅನಂತಮೂತರ್ಿ, ದೇವನೂರು, ಶ್ರೀಕೃಷ್ಣ ಆಲನಹಳ್ಳಿ, ಬೋಳುವಾರು, ವೀಣಾ ಶಾಂತೇಶ್ವರ, ಕಟ್ಟಿಮನಿ, ಕೆರೂರು ವಾಸದೇವಾಚಾರ್ಯ, ಬೆಸಗರಳ್ಳಿ, ನಿರಂಜನ, ಕಟ್ಪಾಡಿ, ಸಾರಾ, ರಾಘವೇಂದ್ರ ಪಾಟೀಲ್, ನುಗಡೋಣಿ, ಮೊಗಳ್ಳಿ ಅವರ ಕಥೆಗಳನ್ನು ಕಂಡರೆ ಸಾಕು ಓದುವ ತುಡಿತ ಇಮ್ಮಡಿಗೊಳ್ಳುತ್ತದೆ. ದಿಗಂಬರ ಕಾವ್ಯ, ರಶಿಯಾದ ಕಥೆಗಳು, ಮಹಾಶ್ವೇತಾ ದೇವಿ, ಕಾಮೂ, ಗಾಕರ್ಿ, ಓ ಹೆನ್ರಿ, ಚೆಕಾಫ್, ವಿಲಯಂ ಶೇಕ್ಸ್ಪೀಯರ್ ಹೀಗೆ ಜನಪರ ಹಾಗೂ ಬದುಕಿನ ಪರ ಬರೆದ ಇನ್ನೂ ಹಲವು ಲೇಖಕರ ಕೃತಿಗಳು ಕಪ್ಪು ಕಾದಂಬರಿಯಷ್ಟೇ ಇಷ್ಟ.
ನಿಮಗಿಷ್ಟವಾದ ನಿಮ್ಮ ಕೃತಿ?
- ಬರೆದಿರುವುದೇ ಮೂರೇ ಕೃತಿಗಳಾಗಿರುವುದರಿಂದ ಮೂರರಲ್ಲಿ ಯಾವುದು ಇಷ್ಟ ಎಂದು ಹೇಳುವುದು ಕಷ್ಟ. ಬರೆಯುವ, ಬೆಳೆಯುವ ತುಡಿತ ಹೊಂದಿದ ನನಗೆ ಮೂರೂ ಇಷ್ಟ. ಹಾಗೆ ಹೇಳಬೇಕೆಂದರೆ ಮೂರು ಕಥಾ ಸಂಕಲನಗಳ ವಿವಿಧ ಬಿಡಿಕಥೆಗಳೇ ನನ್ನನ್ನು ಬಹುವಾಗಿ ಕಾಡುತ್ತವೆ. ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುತ್ತವೆ. ಉಡಿಯಲ್ಲಿಯ ಉರಿ, ಕಾಗದದ ದೋಣಿ, ಮತಾಂತರ, ಹೊಸ ಅಂಗಿ, ಮಣ್ಣು, ಉರಿವ ಕೆಂಡದ ಮೇಲೆ, ಈ ದಾಹ ದೊಡ್ಡದು, ಎರಡು ಪಾರಿವಾಳಗಳು, ಕನ್ನಡಿಯೊಳಗಿನ ಚಿತ್ರಗಳು ಮಾಮೂಲಿ ಗಾಂಧಿ, ಹೀಗೊಂದು ಸಹಜ ಸಾವು, ದೊಡ್ಡವರ ನಾಯಿ ನನಗೆ ಬಹು ಸಮಾಧಾನ ಕೊಟ್ಟ ಇಂಥ ಕಥೆಗಳನ್ನು ಮುಂದಿನ ದಿನಗಳಲ್ಲಿ ಬರೆಯುತ್ತೇನೊ ಇಲ್ಲವೊ ಎಂಬಂತೆ ಸವಾಲು ಒಡ್ಡುತ್ತಿವೆ.
ಇಷ್ಟವಾದ ಪ್ರಾಕಾರ?
- ಸಣ್ಣಕಥೆ ಪ್ರಾಕಾರ. ಕಥೆಗಾರನೆಂದು ಗುರುತಿಸಿಕೊಳ್ಳಲು, ಬರೆಯಲು ಮುಜುಗರದಿಂದಲಾದರೂ ಒಂದು ತೆರನಾದ ಹೆಮ್ಮೆ. ಕಾವ್ಯ, ನಾಟಕ, ಕಾದಂಬರಿ, ಗಜಲ್ ಪ್ರಾಕಾರಗಳೂ ನಂತರದಲ್ಲಿ ಇಷ್ಟ. ನಿಮ್ಮ ಸಾಹಿತ್ಯ ಮೂಡುವ ಹೊತ್ತು?- ಹೊತ್ತು ಗೊತ್ತು ಅಂತ ಹೇಳಾಕ ಬರೊಲ್ಲ. ದಿನಕ್ಕೆ 15 ಗಂಟೆ ಕೆಲಸದಲ್ಲೆ ಕಳೆಯುವ ನನಗೆ ಸಿಕ್ಕ ಸಮಯದಲ್ಲೆ ಸಾಹಿತ್ಯ ಹುಟ್ಟಬೇಕು. ಆದರೂ ಮನಸ್ಸು ವಿಶ್ರಾಂತದಲ್ಲಿ ಇರದಿದ್ದರೂ ಸುತ್ತ ಸ್ವಲ್ಪ ಗದ್ದಲವಿರಬಾರದು. ಮೊದಲಿನಿಂದಲೂ ಬಹುತೇಕವಾಗಿ ಬರೆಯುವುದಕ್ಕೆ ಮಧ್ಯರಾತ್ರಿ ಕಳೆದ ಅವಧಿಯನ್ನೇ ಆಯ್ಕೆಮಾಡಿಕೊಳ್ಳುತ್ತೇನೆ. ಬರೆಹ ಶುರುವಾಗೋದು ಮಾತ್ರ ಸಮಾಧಾನದ ಮಧ್ಯೆ ವಿಚಾರಗಳ ತಾಕಲಾಟದ ಸಂದರ್ಭದಲ್ಲಿ. ನಂತರ ಕಂಪ್ಯೂಟರ್ ಮುಂದೆ ಕುಳಿತಾಗ, ಹಾಗೆ ಕರೆಂಟ್ ಇದ್ದಾಗ ಮುಂದುವರೆಯುತ್ತೆ. ಮೂರನೇ ಕಥಾ ಸಂಕಲನದ ಕಥೆಗಳು ನಾನ್ ಪೇಪರ್ ರೂಪದಲ್ಲೆ ಮೂಡಿವೆ. ಕೀಬೋಡರ್್ನಲ್ಲೆ ಹೊಸ ಬರೆಹಗಳು ಹುಟ್ಟುತ್ತಿರುವುದು. ಮುಂದಿನ ಕೃತಿ / ಯೋಜನೆ?
- ಈ ವರ್ಷ ಕಾದಂಬರಿಯೊಂದನ್ನು ಬರೆಯಬೇಕೆಂದಿರುವೆ. ಗಟ್ಟಿ ವಿಷಯವಸ್ತುವೊಂದು ಬಹುವಾಗಿ ಕಾಡುತ್ತಿದ್ದು, ಬರೆದು ಮುಗಿಸಬೇಕಷ್ಟೆ. ಗಜಲ್ಗಳತ್ತ ಹೊರಳಿರುವ ನಾನು ಇದೇ ವರ್ಷ ಗಜಲ್ ಸಂಕಲನ ತರಲು ಬಯಸಿರುವೆ.

ಶನಿವಾರ, ಮಾರ್ಚ್ 21, 2009

ಮಠಾಧೀಶರೂ ಕೇವಲ ಮನುಷ್ಯರು!


'ಮಠಾಧೀಶರು ಸಮಾಜದ ಶತ್ರುಗಳೇ?' ಎಂಬ ಪ್ರಶ್ನೆ ಹಿನ್ನೆಲೆಯಲ್ಲಿ ಯೋಚಿಸಿದಾಗ ನನಗೆ ಥಟ್ಟನೆ ಅನ್ನಿಸಿದ್ದು, ಮಠಾಧೀಶರೂ ಕೇವಲ ಮನುಷ್ಯರು! ಅವರೇನೂ ನಿಸರ್ಗದ ನೀತಿ ನಿಯಮಗಳಿಗೆ ವಿರುದ್ಧವಾಗಿ ಹುಟ್ಟಿದವರಲ್ಲ. ಮಠ, ಮಠಾಧೀಶ, ಧಾಮರ್ಿಕ ಕೇಂದ್ರ, ಧಮರ್ಾಧಿಕಾರಿ, ಧರ್ಮಗುರು ಇವು ಸಮಾಜದ ಅಸಮಾನತೆಯ ಸೂಚಕಗಳಲ್ಲದೆ ಬೇರೇನೂ ಅಲ್ಲ. ಮಠಾಧೀಶರು ಎಂಬ ಶಬ್ದದ ಬಳಕೆಯಿಂದ ಕೇವಲ ವೀರಶೈವ, ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯಗಳ ಧರ್ಮಗುರುಗಳು ಎಂದರ್ಥವಲ್ಲ. ಈ ಚಚರ್ೆಯಿಂದ ಒಟ್ಟಾರೆ ಎಲ್ಲಾ ಧರ್ಮಗಳ ಧರ್ಮಗುರುಗಳ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿ ಏನು ಎಂಬುದು ಹೊರಬಿದ್ದಿದೆ. ಭೂಮಿ ಮೇಲೆ ಇರುವ ಯಾವ ವ್ಯಕ್ತಿಯೂ ಪ್ರಶ್ನಾತೀತನಲ್ಲ. ಹೀಗಿದ್ದಾಗ ಈ ಮಠಾಧೀಶರ ಬಗ್ಗೆ ಸತ್ಯ ಸಂಗತಿ ಹೊರಹಾಕಿದರೆ ಈ ಧರ್ಮಗುರುಗಳು ಯಾಕೆ 'ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರು'? ಚಿತ್ರದುರ್ಗದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಹಾಗೂ ಹಿರಿಯ ವಿದ್ವಾಂಸ ಎಲ್.ಬಸವರಾಜು ಆಡಿದ ಮಾತುಗಳು ನನ್ನಂಥ ಕುದಿ ಹರೆಯದ ಹುಡುಗರ ಬಾಯಿಂದ ಬರುವ ಮಾತುಗಳು. ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾಡಿದ ಕ್ರಾಂತಿಕಾರಿ ಭಾಷಣ ನಂತರ ಎದ್ದ ಗದ್ದಲದ ಅಲೆಗಳನ್ನು ಹೊರಗಿಟ್ಟರೆ ಸಾಹಿತ್ಯ ಸಮ್ಮೇಳನ ಯಶಸ್ವಿ ಎಂದು ಮಾತನಾಡಿದ ಅನೇಕ ಸೌಮ್ಯ (ಸ್ಲೋ ಪಾಯಿಸನ್)ವಾದಿಗಳು ಅರ್ಥಮಾಡಿಕೊಳ್ಳಬೇಕು. ಎಲ್.ಬಸವರಾಜು ಆ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದಕ್ಕೆ ಮತ್ತು ಅವರು, ಮಠಾಧೀಶರು ಮತ್ತು ರಾಜಕಾರಣಿಗಳು ನಮ್ಮ ಸಮಾಜದ ಶತ್ರುಗಳು' ಎಂದು ಘಂಟಾಘೋಷವಾಗಿ ಜನಸಾಮಾನ್ಯರ ದನಿಯನ್ನು ಹೊರಹಾಕಿದ್ದರಿಂದಲೇ ಆ ಸಮ್ಮೇಳನಕ್ಕೆ ವಿಶೇಷ ಅರ್ಥ ಬಂತು. ತಾವೇ ಶ್ರೇಷ್ಠ, ತಮ್ಮನ್ನು ಯಾರೂ ಪ್ರಶ್ನಿಸಬಾರದು, ಭಕ್ತರೆಂದರೆ ಕಾಣಿಕೆ ಸಲ್ಲಿಸುವ, ಕೈ, ಕಾಲು ಮುಗಿಯುವ, ಸೇವೆ ಮಾಡುವ ಮೂಢ ಹಾಗೂ ಮುಗ್ಧರು ಎಂದು ತಿಳಿಯಬೇಕೆಂಬ ಅವರ ಹಟಕ್ಕೆ ಒಂದಷ್ಟರ ಮಟ್ಟಿಗೆ ಪೆಟ್ಟು ಬಿತ್ತು. ಈ ಮಠಾಧೀಶ ಒಬ್ಬನೇ ಆದರೂ ಅವನನ್ನು ಬಹು ಬಹುವಚನಗಳಿಂದಲೇ ಸಂಬೋಧಿಸಬೇಕು. ಇದು ಯಾವ ಭಾಷೆಯ, ಯಾವ ಭಾಷಾತಜ್ಞ ಕಂಡುಹಿಡಿದ ವ್ಯಾಕಾರಣವೊ? ಮಠಗಳು ಮತ್ತು ಮಠಾಧೀಶರು ಈ ಹಿಂದೆ ಕೈಗೊಂಡ ಹಾಗೂ ಈಗ ಕೆಲವು ಮಠಗಳು ಮುಂದುವರೆಸಿದ ಸಾಮಾಜಿಕ ಸೇವೆಯನ್ನು ಗಮನಿಸಿ ಎಲ್ಲ ಮಠಗಳು ಮತ್ತು ಮಠಾಧೀಶರನ್ನು ಒಂದೇ ತಕ್ಕಡಿಯಲ್ಲಿ ತೂಗಿ ನೋಡಬೇಕೆನ್ನುವುದು ಯಾವ ನ್ಯಾಯ? ಕೆಲ ಮಠಾಧೀಶರು ಸಮ್ಮೇಳನಾಧ್ಯಕ್ಷರ ಭಾಷಣಕ್ಕೆ ಸಿಡಿಮಿಡಿಗೊಂಡರು. ಇಂತಹವರೇ ಈ ನಾಡಿನಲ್ಲಿ ದೇಶದಲ್ಲಿ ಹೆಚ್ಚಿದರೆ ತಮಗೆ ಪುಗ್ಸಟ್ಟೆ ಸಿಗುವ ಸ್ಥಾನ, ಮಾನ, ಗೌರವ, ಪಲ್ಲಕ್ಕಿ, ಮೆರವಣಿಗೆ, ಬಂಗಾರದ ಕಿರೀಟ, ಉತ್ಸವ, ಆರಾಧನೆ, ಲಕ್ಷದೀಪೋತ್ಸವ ಹೀಗೆ ಹಲವು ಸಂಗತಿಗಳು ಇನ್ನಿಲ್ಲವಾಗುತ್ತವಲ್ಲ ಎಂಬ ಅಳುಕು ಬಲವಾಗಿಯೇ ಕಾಡಿರಬೇಕು. ಹನ್ನೆರಡನೇ ಶತಮಾನದಲ್ಲೆ ಬಸವಾದಿ ಶರಣರು ಕಾಯಕವೇ ಕೈಲಾಸ ಎಂದರು. ಈಗಿನ ಬಹುತೇಕ ಧರ್ಮಗುರುಗಳು ಯಾವ ಕಾಯಕವನ್ನು ಮಾಡುತ್ತಿದ್ದಾರೆ. ಮತ್ತೇರಿಸುವ ಮತದ ಬೂದಿಯನ್ನೆ ಮುಗ್ಧ ಜನರಿಗೆ ಎರಚುತ್ತಿದ್ದಾರೆ. ಜನ ಮತ್ತಿನಲ್ಲಿದ್ದಾಗ ಅವರ ಮೈಮೇಲಿನ ಬಟ್ಟೆ ಬರೆಯನ್ನೂ ಬಿಡದೆ ದೋಚುವ ಕಾಯಕ ಮಾಡುತ್ತಿದ್ದಾರೆ. ಇಂಥಹವರನ್ನು ದರೋಡೆಕೋರರು ಎನ್ನದೆ ಬೇರೆ ಪದ ಬಳಸಬೇಕು ಎಂದರೆ ಇಂಥದೇ ಕೆಲಸ ಮಾಡುವ ದರೋಡೆಕೋರರು ಮತ್ತು ಕಳ್ಳಕಾಕರನ್ನು ಮಠಾಧೀಶರು ಎಂದು ಕರೆಯಬೇಕೆ? ಎಂದು ತಮಾಷೆ ಮಾಡುವುದಿಲ್ಲ. ಹಾಗೆಯೇ ಇದೆ ಹಿಂದಿನ ತಂತ್ರ. ಮಠಗಳು, ಮಠಾಧೀಶರು, ಧಾಮರ್ಿಕ ಕೇಂದ್ರಗಳು, ಧರ್ಮಗುರುಗಳು ಏನೆಲ್ಲಾ ಸಾಮಾಜಿಕ, ಸಾಂಸ್ಕೃತಿಕ, ಧಾಮರ್ಿಕ ಸೇವೆ ಮಾಡುತ್ತಾ ಇವೆ ಎಂದು ಬೊಗಳೆ ಬಿಡುವವರಿಗೇನೂ ಕಡಿಮೆಯಿಲ್ಲ. ಹಾಗೆ ಸೇವೆ ಮಾಡುವುದೇ ದೊಡ್ಡ ಹೆಗ್ಗಳಿಕೆಯಲ್ಲ. 'ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೂಸುವ ಗಾಳಿ ನಿಮ್ಮ ದಾನ, ನಿಮ್ಮ ದಾನವನುಂಡು.' ದಾಸಿಮಯ್ಯನ ವಚನವನ್ನು ಮಠಾಧೀಶರನೇಕರು ತಮ್ಮ ಪುಂಖಾನುಪುಂಖ ಭಾಷಣಗಳಲ್ಲಿ ಹೇಳುವುದುಂಟು. 'ಮಾಡಿದೆನೆಂಬುದು ಮನದಲ್ಲಿ ಹೊಳೆದರೆ, ಏಡಿಸಿ ಕಾಡಿತ್ತು ಶಿವನ ಡಂಗುರ! ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ, ಮಾಡಿದೆನೆಂಬುದು ಮನದಲ್ಲಿಲ್ಲದಿದ್ದರೆ ಬೇಡಿತ್ತನೀವ ಕೂಡಲಸಂಗಮದೇವ.' ಈ ವಚನವನ್ನು ನಾನೇನು ಉಲ್ಲೇಖಿಸುವುದು ಅಗತ್ಯವಿಲ್ಲ. ಯಾಕೆಂದರೆ ಬಹುತೇಕ ಮಠಾಧೀಶರು ಇಂತಹ ನೂರಾರು ವಚನಗಳನ್ನು ಅರೆದು ಕುಡಿದವರು, ಆದರೆ ಬದುಕಲರಿಯರು ಅಷ್ಟೆ! ಹಾಗೆ ಮಠಗಳಿಂದ ಸೇವೆ ಪಡೆದ ಬಸವರಾಜು ಹಾಗೆ ಮಾತನಾಡುವ ಮುನ್ನ ವಿಚಾರ ಮಾಡಬೇಕೆಂದು ಬೊಬ್ಬೆ ಹಾಕಿದವರು ತಮ್ಮ ಅಹಮಿಕೆಯ ಪರೀಧಿಯಾಚೆ ವಿಚಾರಮಾಡಬೇಕಿತ್ತು. ಮಠಾಧೀಶರೆಂದು ಇವರನ್ನು ನಾವು ಒಪ್ಪಿಕೊಂಡರಲ್ಲವೆ ಅವರಿಗೆ ಗೌರವ, ಘನತೆ ಹೆಚ್ಚುವುದು? ಜನಸಾಮಾನ್ಯರನ್ನು ವಂಚಿಸಿ, ಕಣ್ಣಿಗೆ ಬಟ್ಟೆ ಕಟ್ಟಿ, ಹಣ, ಮದ್ಯದ ಆಮಿಷ ತೋರಿಸಿ ಚುನಾವಣೆಯ ಕಣದಲ್ಲಿ ಮೆರೆಯುವ ರಾಜಕಾರಣಿಗೂ ಇಂತಹದೇ ಬಲು ನಾಜೂಕಿನ ಭಯ, ಭಕ್ತಿಯ ನೆಪವೊಡ್ಡಿ ಸಾಮಾನ್ಯರನ್ನು ತಮ್ಮ ಬುಟ್ಟಿಯಲ್ಲಿ ಹಾಕಿಕೊಂಡು ಮೋಸಮಾಡುವುದರಲ್ಲಿ ಯಾವುದೇ ವ್ಯತ್ಯಾಸ ಕಾಣಸಿಗದು. ಮಠಗಳು ಇಂದು ಕೇವಲ ಧರ್ಮ, ಧಮರ್ೋಪದೇಶ ಎಂಬ ವಿಷಯಗಳು ಅಡಗೂಲಜ್ಜಿ ಕಥೆಯಲ್ಲಿ ಬರುವ ಸಂಗತಿ, ಚಿತ್ರಣಗಳಂತಿಲ್ಲ. ಧರ್ಮದ ಹೆಸರಲ್ಲಿ ಅಧರ್ಮವನ್ನೇ ಸಾರುವ, ಮನುಷ್ಯತ್ವ, ಮನುಷ್ಯ ಪ್ರೀತಿಯನ್ನು ಧಿಕ್ಕರಿಸುವ, ನಿಸರ್ಗದತ್ತವಾದ ಸಮಾನತೆಗೇ ಸವಾಲಾಗುವ ಸಂಗತಿಗಳೇ ಆಗಿವೆ. ಇವತ್ತಿನ ಬಹುತೇಕ ಮಠಗಳು ರಾಜಕೀಕರಣಗೊಂಡು, ಇನ್ನೂ ಕೆಲವು ಮಠಗಳು ಕೇಸರೀಕರಣಗೊಂಡು ವಿವಿಧ ಪಕ್ಷಗಳ ಅಂಗ ಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿವೆ. ಕೆಲವು ಸ್ವಾಮಿಗಳು ರಾಜಕಾರಣಿಗಳನ್ನು ಆರಾಧಿಸುವ, ಅವರ ಬಾಲಂಗೋಚಿಗಳಂತೆ ವತರ್ಿಸುವುದನ್ನು ಕಂಡರೆ ಛೀ ಅನ್ನಿಸದೆ ಇರದು. ಕೆಟ್ಟು ಕೆರ ಹಿಡಿದ ರಾಜಕಾರಣದ ಅಂಗುಲದಲ್ಲಿ ಸಿಹಿ ಅಡರಿದೆ ಎಂದು ನೆಕ್ಕುವ ಮಠಾಧೀಶರೂ ನಮ್ಮ ಸುತ್ತಲಿನ ಪ್ರಪಂಚದಲ್ಲಿರುವುದು ಅವಮಾನಕರ. ಮಠಾಧೀಶರು ಕೇವಲ ಮನುಷ್ಯರು ಎಂದೇ ನನ್ನ ಅನಿಸಿಕೆ ಶುರುಮಾಡಿದೆ. ಕಾರಣವಿಷ್ಟೆ ಅವರೂ (ಅವರಿಗೂ ಗೊತ್ತಿರುವಂತೆ) 'ಒಂದೇ ಯೋನಿಯಿಂದ ಹೊರಬಂದ ಸಾಮಾನ್ಯ ಶಿಶು'. ಗಾಂಧೀಜಿ ಹೇಳುತ್ತಿದ್ದಂತೆ, ಒಬ್ಬ ಸಾಮಾನ್ಯ ಚಮ್ಮಾರನಿಗೂ, ರಾಷ್ಟ್ರಾಧ್ಯಕ್ಷನಿಗೂ ಸ್ಥಾನ ಮಾನದಲ್ಲಿ ಯಾವುದೇ ವ್ಯತ್ಯಾಸವಿಲ್ಲ' ಎಂಬ ಮಾತು ಹನ್ನೆರಡನೇ ಶತಮಾನದ ಶರಣರ ವಚನಗಳಲ್ಲೂ ಧ್ವನಿಸುತ್ತದೆ. ಒಂಬಂತ್ತು ಶತಮಾನಗಳ ಹಿಂದೆಯೇ ಸಾಮಾಜಿಕ ಮತ್ತು ವೈಚಾರಿಕ ಕ್ರಾಂತಿಗೆ ಕರೆನೀಡಿದ ಶರಣರ ಲವಲೇಶವಾದರೂ ಇವತ್ತಿನ ಈ ಬುರುಡೆ ಸ್ವಾಮಿಗಳಲ್ಲಿ ಕಾಣಲು ಸಾಧ್ಯವೇ? ಹೀಗಿದ್ದೂ ಅವರು ಬಸವರಾಜು ಎತ್ತಿರುವ ಪ್ರಶ್ನೆಗೆ ಕೆಟ್ಟ ಕನಸು ಕಂಡವರಂತೆ ಚಿಟಾರನೆ ಚೀರಿದ್ದು, ರಚ್ಚೆ ಹಿಡಿದಿದ್ದು, ಬೀದಿಯಲ್ಲಿ ಉರುಳಾಡಿ ಅತ್ತಿದ್ದು ನನ್ನಂತವನಿಗೂ ಅವರ ದಯನೀಯ ಸ್ಥಿತಿಯನ್ನು ಕಂಡು ಅಯ್ಯೋ ಎನಿಸುತ್ತದೆ. ಯಾವುದೇ ಮಠ, ಧಾಮರ್ಿಕ ಕೇಂದ್ರ ಅಲ್ಲೇ ಗೂಟ ಬಡಿದುಕೊಂಡು ಕುಳಿತ ಖಾವಿಧಾರಿಗಳ ಬೆವರಿನ ಫಲವಲ್ಲ. ನಮ್ಮ ಮೂಢ ಸಮಾಜದ ಮುಗ್ಧ ಜನಸಮುದಾಯವನ್ನು ವಂಚಿಸಿ ವಸೂಲು ಮಾಡಿದ ಹಣದಿಂದ ನಿಮರ್ಿಸಿದವು ಎಂದು ತಿಳಿಯಬೇಕು. ದುಡಿಯಲಾರದ ವ್ಯಕ್ತಿ (ಅಸಹಾಯಕನಾಗಿದ್ದರೆ ಮಾತ್ರ) ಅನ್ನದಲ್ಲಿ ಪಾಲಿಲ್ಲ ಎಂಬ ಸಂಗತಿಯನ್ನು ಮಠಾಧೀಶರು ಗಂಭೀರವಾಗಿ ಪರಿಗಣಿಸಬೇಕು. ಕಾಯಕನಿಷ್ಠೆ ಮತ್ತು ದಾಸೋಹದ ತತ್ವಗಳನ್ನು ಗಾಳಿಗೆ ತೂರಿ ಪಡೆದ ಅನ್ನ, ಹಣ, ವಸ್ತ್ರ, ಒಡವೆ, ಗೌರವ, ಸ್ಥಾನ, ಮಾನ ಹೀಗೆ ಇನ್ನಿತರ ಸಂಗತಿಗಳು ಎಂಜಲಿನಂತೆ, ಮತ್ತೊಂದು ಅನ್ವರ್ಥಕವೆಂದರೆ ಥೇಟ್ ಅಮೇಧ್ಯ. ಜನರಿಂದ ಪಡೆದ ದುಡ್ಡಿನಲ್ಲೆ ಮಜಾ ಮಾಡುವ, ಬಡ್ಡಿಗೆ ದುಡಿಸುವ ಮಠಾಧೀಶರು ಯಾವುದೇ ಕಾಪರ್ೋರೇಟರ್ಗಳಿಗಿಂತ ಕಡಿಮೆಯೇನಲ್ಲ. ಚುನಾವಣೆಗೆ ಮುನ್ನ ರಾಜಕಾರಣಿಗಳಿಗೆ ಆಶೀರ್ವದಿಸುವ ನೆಪದಲ್ಲಿ ತಮ್ಮ ಭಕ್ತರೆನಿಸಿಕೊಂಡ ಮುಗ್ಧ ಜನರಿಂದ ಆಣೆ, ಪ್ರಮಾಣ ಮಾಡಿಸಿಕೊಂಡು ಸಂವಿಧಾನ, ಪ್ರಜಾಪ್ರಭುತ್ವದ ಆಶೋತ್ತರಗಳನ್ನೇ ಗಾಳಿಗೆ ತೂರಿ ತಮಗೆ ಬೇಕಾದವರ ಪರ ಮತ ಯಾಚಿಸುವ ಮಠಾಧೀಶರು ರೌಡಿಗಳು, ಸುಪಾರಿ ಕೊಲೆಗಾರರಷ್ಟೇ ಅಪಾಯಕಾರಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ನಂತರ ಇಂಥದೆ ಮಠದ ಮಠಾಧೀಶರ ಆಶೀವರ್ಾದದಿಂದ ತಾವು ಗೆದ್ದೆವು, ಆ ಮಠದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಕೊಡುವುದಾಗಿ (ಅದು ಅವರಪ್ಪನ ಮನೆಯ ದುಡ್ಡಾಗಿದ್ದರಲ್ಲವೆ?) ಹೇಳುವ ರಾಜಕಾರಣಿಗಳು, ಮಠಾಧೀಶರು ಮತ್ತು ಮಂತ್ರವಾದಿಗಳ ಅಣತಿಯಂತೆಯೇ ಸಕರ್ಾರ ನಡೆಸುವ ಮಂತ್ರಿ ಮಹೋದಯರು ನಮ್ಮ ನಾಡಿನಲ್ಲಿರುವುದೇ ಅತ್ಯಂತ ದುದರ್ೈವದ ಸಂಗತಿ. ಸಾಹಿತ್ಯ ಸಮ್ಮೇಳನದಲ್ಲಿ ಎಲ್.ಬಸವರಾಜು ಹೊರಹಾಕಿದ ವಿಷಯಗಳು ಇನ್ನೂ ಕೇವಲ ಮೇಲ್ಪಪದರ ಅನಿಸಿಕೆಗಳು. ಈ ನೆಲದ ಜನ ಸಮುದಾಯ ಸಾವಿರಪಟ್ಟು ಅಸಹನೆ, ಸಿಟ್ಟು ಹೊಂದಿದ್ದಾರೆ. ಜನರಿಂದ, ಜನರಿಗಾಗಿ, ಜನರ ಸಕರ್ಾರವಾಗಬೇಕಿದ್ದ ಸಕರ್ಾರಗಳು ಕೇವಲ ಧರ್ಮದ, ಧರ್ಮಗುರುಗಳ, ಮಠಗಳ, ಮಠಾಧೀಶರ, ಹಣವಂತರ, ವಿದೇಶಿ ಕಂಪೆನಿಗಳ ಸಕರ್ಾರವಾಗಿರುವುದು ಖೇದನೀಯ. ಕೇವಲ ವೀರಶೈವ, ಬ್ರಾಹ್ಮಣ, ಲಿಂಗಾಯತ ಸಮುದಾಯಗಳ ಧರ್ಮಗುರುಗಳಿಗೇ ಮಾತ್ರ ಎಲ್.ಬಸವರಾಜು ಅವರ ಮಾತುಗಳು ಅನ್ವಯಿಸುತ್ತವೆ ಎಂದಲ್ಲ. ಧರ್ಮದ ಅಫೀಮು ಕುಡಿಸಿ, ತಾವು ಅಮೃತ ಸವಿಯುವ ಐಷಾರಾಮಿ ಹಾಗೂ ಖಾವಿಯೊಳಗೇ (ಇದು ಬಿಳಿ, ಹಸಿರು ಬಟ್ಟೆ ತೊಡುವವರಿಗೂ ಅನ್ವಯಿಸುತ್ತದೆ ಎಂದು ಬೇರೆ ಹೇಳಬೇಕಿಲ್ಲ) ಕಲರ್ ಕಲರ್ ಕನಸು ಕಾಣುವ ಧರ್ಮಗುರುಗಳು ಸ್ವಲ್ಪ ತಮ್ಮ ಮನದ ಕಿಟಕಿ ಸಮೀಪ ನಿಂತು ತಮ್ಮ ಅಂತರಾಳದ ನುಡಿಗಳನ್ನು ಚಿತ್ತದಿಂದ ಆಲಿಸಬೇಕಿದೆ. ತಾವು ಈ ಸಮಾಜಕ್ಕೆ ನೀಡಿರುವುದಾದರೂ ಏನು? ಪಡೆದುದಾರೂ ಏನು? ತಾವು ಇಂತಹ ಸ್ಥಾನ, ಗೌರವ, ಪ್ರತಿಷ್ಠೆಗೆ ಅರ್ಹರೆ? ತಾವೂ ಯಾಕೆ ಸಾಮಾನ್ಯರಂತೆ ಕೂಲಿಯನ್ನಾದರೂ ಮಾಡಿ ಹೊಟ್ಟೆ ಹೊರೆಯಬಾರದು? ಬೇರೆಯವರ ಭಿಕ್ಷೆಯಲ್ಲಿ, ಮೋಸದಿಂದ ದೋಚಿದ ಹಣದಿಂದ ಎಷ್ಟು ದಿನ ಬದುಕುವುದು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ಕೊನೆಯಲ್ಲಿ ಹೇಳುವುದಿಷ್ಟೆ, ಇಂತಹ ಮುಕ್ತ ಚಚರ್ೆಗೆ ಅವಕಾಶ ಮಾಡಿಕೊಟ್ಟ 'ಅಗ್ನಿ' ಬಳಗ ನಿಜಕ್ಕೂ ಅಭಿನಂದನೀಯ. ಇದು ಕೇವಲ ಎಲ್.ಬಸವರಾಜು ಪರ ಎನಿಸದೆ, ಇಡೀ ನಾಡಿನ ಸಮಸ್ತ ಜನಸಮುದಾಯದ ಅಂತರಾಳದ ಆಶಯ. ಈ ಸುದೀರ್ಘ ಸಂವಾದದಲ್ಲಿ ಚಚರ್ೆಯಾದ ಅನಿಸಿಕೆಗಳು ಪುಸ್ತಕ ರೂಪದಲ್ಲಿ ಹೊರಬಂದು ಎಲ್ಲ ಧಾಮರ್ಿಕ ಕೇಂದ್ರಗಳನ್ನು, ಧರ್ಮಗುರುಗಳು ತಲುಪಲಿ. ಆ ಮೂಲಕ ಅವರನ್ನು ಆಗಾಗ್ಗೆ ಬೆಚ್ಚಿ ಬೀಳಿಸುವ ಬೆತ್ತಗಳಾಗಲಿ. ಹಾಗೆ ಆದಾಗಲೇ ಈ ಸಂವಾದಕ್ಕೆ ವಿಶೇಷ ಅರ್ಥ ಬರುತ್ತದೆ.

-ಕಲಿಗಣನಾಥ ಗುಡದೂರು, ಸಿಂಧನೂರು

ಮಂಗಳವಾರ, ಮಾರ್ಚ್ 17, 2009

ಅಕ್ಕನೆಂಬ ತಾಯಿ


ಅಮ್ಮ ಮತ್ತು ಅಕ್ಕನಿಲ್ಲದ ಮನೆ ಒಂದು ತೆರನಾದ ಖಾಲಿ ಖಾಲಿ! ಅಕ್ಕ ಮತ್ತು ಅಮ್ಮನ ನಡುವೆ ಬಹಳ ವ್ಯತ್ಯಾಸ ಗುರುತಿಸಲಾಗದೇನೊ? ಅಕ್ಕನೆಂದರೆ ಥೇಟ್ ತಾಯಿಯೇ. ಅಕ್ಕರೆಯಲಿ ಅವ್ವನಿಗೆ ಸವಾಲು ಒಡ್ಡುವ ರೀತಿ ಅಕ್ಕನದು. ನನ್ನಕ್ಕ ಶಿವಮ್ಮನೆಂದರೆ ತಾಯಿ, ತಂದೆ, ಗುರು, ಹಿತೈಷಿ. ಆಕೆ ಓದಿದ್ದು ಕೇವಲ ಮೂರನೇ ಕ್ಲಾಸ್. ಆಕೆಗಿಂತ ನಾನು ಒಂದೂವರೆ ವರ್ಷ ಚಿಕ್ಕವ. ಎರಡೂ ಕ್ಲಾಸ್ಗಳೂ ಕೂಡಿಯೇ ಇದ್ದವು ಆಗ. ನನಗೆ ಊಟಮಾಡಿಸುವುದರಿಂದ ಹಿಡಿದು ನನ್ನೆಲ್ಲಾ ಜವಾಬ್ದಾರಿ ಆಕೆಯ ಪುಟ್ಟ ಹೆಗಲುಗಳ ಮೇಲೆ. ಆಕೆ ಹತ್ತೆನ್ನರಡು ವರ್ಷಗಳಾಗುತ್ತಲೆ ಅವ್ವನ ಜೊತೆಗೆ ಕೂಲಿಗೆ ಜೊತೆಯಾದಳು. ಅವ್ವ ಮತ್ತು ಅಕ್ಕ ಕೂಲಿಯಿಂದ ತಂದ ದುಡ್ಡೇ ನನ್ನ ಓದು, ಬಟ್ಟೆಗಂತ ಖಚರ್ಾಗಿದ್ದು. ನನ್ನ ಎಂ.ಎ. ಸಟರ್ಿಫಿಕೇಟುಗಳ ಮೇಲೆ ಅಕ್ಕನದೇ ಬೆವರಿನ ಹನಿಗಳ ಸಹಿಗಳಿವೆ. ಅಕ್ಕ ನನಗೆ ಹಲವು ಬಾರಿ ಹಂಗಿಸಿದ್ದುಂಟು! ಅಂದರೆ ಆಕೆ ಕೆಟ್ಟ ಮನಸ್ಸಿನಿಂದ ಹಾಗೆ ಮಾಡುತ್ತಿರಲಿಲ್ಲ. ತಾನು ದುಡಿದ ದುಡ್ಡು ಎಲ್ಲಿ ವೇಸ್ಟ್ ಆಗಿ ಬಿಡುತ್ತೊ ಅನ್ನೊ ಆತಂಕ. ಅಪ್ಪ, ಅವ್ವನೊಂದಿಗೆ ನನಗೆ ಕೊಡುತ್ತಿದ್ದ ದುಡ್ಡಿನ ಬಗ್ಗೆ ಆಗಾಗ ಜಗಳ ಕಾಯುತ್ತಿದ್ದಳು. ಹಾಗೆ ಜಗಳ ಕಾಯುತ್ತಿದ್ದರಿಂದಲೇ ನನಗೆ ದುಡ್ಡಿನ ಬೆಲೆ ಅರಿವಾಗಿದ್ದು. ನಾನೂ ಹೈಸ್ಕೂಲ್ ಮತ್ತು ಕಾಲೇಜು ಓದುತ್ತಿದ್ದಾಗ ಅಕ್ಕ ಮತ್ತು ಅವ್ವನೊಂದಿಗೆ ಕೂಲಿಗೆ ಹೋಗುತ್ತಿದ್ದೆ. ಪದವಿ ಪಡೆದರೂ ದುಡಿಯುವ ಸ್ಥಳದಲ್ಲಿ ಸಮಾನತೆ ಎಂಬುದಿಲ್ಲ. ಆದರೆ ಆಗ ನಾನು ಅಕ್ಕ, ಅವ್ವ ಮತ್ತು ಊರಿನ ಕೆಲವು ಬಡವರ ಜೊತೆಗೆ ಕೂಲಿಗೆ ಹೋಗುತ್ತಿದ್ದಾಗ ಸಿಕ್ಕ ಖುಷಿ, ಅವರೆಲ್ಲರ ಜೊತೆಗೆ ಗಿಡದ ನೆರಳಲ್ಲಿ ಕುಳಿತು ಉಂಡ ಸಂಭ್ರಮ, ಗದ್ದೆಯ ವರತಿಗಳಲ್ಲೆ ಬಗ್ಗಿ ಬೊಗಸೆಯಲ್ಲಿ ಸಾಮೂಹಿಕವಾಗಿ ಸ್ವಲ್ಪವೂ ಹೇಸಿಕೆ, ಮುಜುಗರವಿಲ್ಲದೆ ನೀರು ಕುಡಿದ ಪರಿ ಈಗ ಎಲ್ಲೂ ಸಿಗದು. ಅಪ್ಪ, ಅವ್ವನಿಗಿಂತ ತುಸು ಹೆಚ್ಚೇ ನೆನಪಾಗುವ, ಕಾಡುವ ವ್ಯಕ್ತಿಯೆಂದರೆ ಅಕ್ಕನೇ. ಈಗಲೂ ತಮ್ಮ ಊರಿಗೆ ಬರುತ್ತಿಲ್ಲ ಎಂದು ಅಕ್ಕ ಸದಾ ಹಲಬುತ್ತಿರುತ್ತಾಳೆ. ನಾ ಹೋದಾಗ ಊಟ ಮಾಡದೇ ಬಂದರೆ ಆಕೆ ಬ್ರಹ್ಮಾಂಡದಷ್ಟು ಸಿಟ್ಟು. ನನಗಿಂತ ಕೇವಲ ಒಂದೂವರೆ ವರ್ಷ ದೊಡ್ಡವಳಾದ ಅಕ್ಕ ದುಡಿದು ದುಡಿದು ಅವ್ವನಿಗಿಂತಲೂ ವಯಸ್ಸಾದಂತೆ ಕಾಣುತ್ತಿದ್ದಾಳೆ. ಅಪ್ಪನ ಪಾಲಿನಲಿ ನನಗೇನೂ ಬೇಡವೆಂದೇ ನಾನು ಹಲವು ವರ್ಷಗಳ ಹಿಂದೆಯೇ ಹೇಳಿದ್ದುಂಟು. ನನ್ನ ಪಾಲೇನಾದರೂ ಕೊಡಬೇಕೆನಿಸಿದರೆ ನನ್ನ ಅಕ್ಕನಿಗೇ ಕೊಡಿ ಎಂದೇ ಹೇಳಿದ್ದೇನೆ. ಅಕ್ಕ ದುಡಿದು ಓದಿಸದದ್ದರೆ... ಬೇಡ ಬಿಡಿ. ಏನು ಆಗುತ್ತಿದ್ದೆನೊ? ಯೋಚಿಸಿದಷ್ಟು ಮನಸ್ಸು ಮುದುಡುತ್ತದೆ. ನನ್ನನ್ನು ಸ್ನಾತಕೋತ್ತರ ಪದವೀಧರ ಮಾಡಿದ ಅಕ್ಕ ನನ್ನ ಪಾಲಿನ ವಿಶ್ವವಿದ್ಯಾಲಯ. ಪೈಸೆಯ ಲೆಕ್ಕ ಆಕೆಯಿಂದಲೇ ಕಲಿಯಬೇಕು. ಅಕ್ಕನ ನೋಡಲು ಮುಂದಿನ ವಾರವೇ ಊರಿಗೆ ಹೋಗುತ್ತೇನೆ. ಅಕ್ಕನಿಗೆ ಸ್ವೀಟ್ ಎಂದರೆ ಪಂಚಪ್ರಾಣ. ಏನಾದರೂ ಒಯ್ಯುತ್ತೇನೆ. ಇನ್ನೂ ಒಂದು ಮಾತು. 'ಪುಟ್ಟ ಪಾದಗಳು' ಲೇಖನದಲ್ಲಿ ಕೇವಲ ಒಂದಿಬ್ಬರ ಪಾದಗಳಿಗೆ ಈಗಲೂ ನಮಸ್ಕರಿಸುತ್ತೇನೆ ಎಂದು ಬರೆದಿದ್ದೆನಲ್ಲ ಅವುಗಳಲ್ಲಿ ಅಕ್ಕನ ಪಾದಗಳು ಸೇರಿವೆ. ಹೋದಾಗ ಮತ್ತೆ ಅಕ್ಕನ ಪಾದಗಳಿಗೆ ನನ್ನ ಹಣೆ, ಕಣ್ಣೊತ್ತಿ ನಮಸ್ಕರಿಸಿ ಬರುವೆ. ನಿಜಕ್ಕೂ ಅಕ್ಕ ಎಂಬ ಅಕ್ಕರೆಯ ಜೀವಿ ಬಹುತೇಕ ಜೀವನಾಡಿ, ಒಡನಾಡಿ, ಥೇಟ್ ಭೂಮಿಯಂಥವಳು... ಆಕೆಗೆ ಹೋಲಿಕೆಯೆಂದರೆ ತಾಯಿಯೇ ಬಿಡಿ....
-ಕಲಿಗಣನಾಥ ಗುಡದೂರು

ಸೋಮವಾರ, ಮಾರ್ಚ್ 16, 2009

ಪವಿತ್ರ ಪುಟ್ಟ ಪಾದಗಳ ಕಣ್ಣಿಗೊತ್ತಿಕೊಂಡು...


ಜಗತ್ತಿನ ಅತ್ಯಂತ ಪವಿತ್ರವಾದ ವಸ್ತು ಯಾವುದು? ಹೀಗೆ ಪ್ರಶ್ನಿಸಿಕೊಂಡಾಗ ಅನ್ನಿಸಿದ್ದು, ಹಸುಕಂದಮ್ಮಗಳ ಬೆಣ್ಣೆ ಮೆದುವಿನ ಪುಟ್ಟ ಪಾದಗಳೇ ಅತ್ಯಂತ ಪವಿತ್ರ. ಇಬ್ಬನಿ ತಣ್ಣನೆಯ ಕಂದಮ್ಮಗಳ ಪುಟ್ಟ ಪಾದಗಳೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಅವುಗಳನ್ನು ನೋಡುತ್ತಾ ಹಲವು ಬಾರಿ ನನ್ನನ್ನು ನಾನು ಮರೆಯುವುದುಂಟು. ಅದೆಷ್ಟು ಸುಂದರವೊ ಈ ಪುಟ್ಟ ಪಾದಗಳು. ಕಣ್ಣ ಕಿರಣ, ಇನಿದನಿ, ತಂಗಾಳಿ, ತಿಳಿಗೊಳ ಎಲ್ಲಕ್ಕೂ ಮಿಗಿಲಾದ ನವಿರು ಈ ಪುಟ್ಟ ಪಾದಗಳಲಿ. ಇಂತಹ ಪುಟ್ಟ ಪಾದಗಳಿಗೆ ಹಣೆ ಹಚ್ಚುವುದೆಂದರೆ ಎಲ್ಲಿಲ್ಲದ ಖುಷಿ, ಸಂಭ್ರಮ, ಹಬ್ಬ, ಜಾತ್ರೆ ಮನದರಮನೆಯಲ್ಲಿ. ಕಣ್ಣಿಗೊತ್ತಿಕೊಂಡರೆ ಬೇಕಿಲ್ಲ ಹಾಡು, ಬರೆಹ, ಓದು, ಊಟ, ನಿದ್ದೆ ಇನ್ನೂ ಏನೇನೊ ಆ ಕ್ಷಣದಲ್ಲಿ. ಇಂಥಹ ಪುಟ್ಟ ಪಾದಗಳಿಗೆ ಹಣೆ ಹಚ್ಚಿದಾಗ, ಕಣ್ಣೊತ್ತಿದಾಗ ಭಕ್ತಿಯೊ, ಪ್ರೀತಿಯೊ ಅದೇನೊ ಒಂಥರ ಮೈಯಲ್ಲಿ ಪ್ರವಾಹ ಶುರು. ನನಗೆ ತಂದೆ-ತಾಯಿ ಹಾಗೂ ತೀರಾ ಒಂದಿಬ್ಬರ ಪಾದಗಳಿಗೆ ನಮಿಸುವುದು ಬಿಟ್ಟರೆ, ಸ್ವಾಮಿಗಳು, ಜಗದ್ಗುರು, ಬಾಬಾ, ತಾವೇ ದೊಡ್ಡೋರು ಎಂದು ಕರೆದುಕೊಳ್ಳೋರು, ದೇವರು, ಫೋಟೊಗಳು, ಕಲ್ಲು, ಕಟ್ಟಿಗೆ ಮೂತರ್ಿಗಳ ಪಾದಗಳನ್ನು ಕೈಯಿಂದ ಮುಟ್ಟಲೂ ಬಹು ಬೇಜಾರು, ಥೇಟ್ 'ಅದೇನೋ' ಮುಟ್ಟಿದಂತೆ ಕೈ ತನ್ನಷ್ಟಕ್ಕೆ ತಾನೆ ಹಿಂದಕ್ಕೆ ಸರಿಯುತ್ತದೆ. ಎಂತೆಂಥ ಅನರ್ಹ ವ್ಯಕ್ತಿಗಳ ಪಾದಗಳನ್ನು ಮುಟ್ಟಿ ಸಂಭ್ರಮಿಸುವ ಜನರನ್ನು ನೋಡಿದಾಗ ಅಯ್ಯೊ ಎನಿಸುತ್ತದೆ. ಹೋಗಿ ನಿಮ್ಮ ಮನೆಯ ಪುಟ್ಟ ಕಂದಮ್ಮಗಳ ಪಾದಗಳನ್ನಾದರೂ ಮುಟ್ಟಿ ಆನಂದಿಸಿ, ಕಣ್ಣಿಗೊತ್ತಿಕೊಳ್ಳಿ ನೀವು ಹಾಗೆ ಯಾರ್ಯಾರದೊ ಕಾಲುಗಳನ್ನು ಯಾವುದ್ಯಾವುದೊ ಕಾರಣಗಳಿಂದ ಹಿಡಿದ ಪಾಪಕ್ಕೆ ಪರಿಹಾರ ದೊರಕೀತು. ಹಾಗೆ ಪಾದಗಳನ್ನು ಮುಟ್ಟಿಸಿಕೊಳ್ಳುವವರೂ ಮಕ್ಕಳಂತೆಯೇ ಇರಬೇಕು. ಯಾವುದೇ ಬಣ್ಣ, ಜಾತಿ, ಧರ್ಮ, ಭಾಷೆ, ಪ್ರಾಂತ, ದೇಶ, ಓದು, ಪ್ರಶಸ್ತಿ, ಪುರಸ್ಕಾರಗಳ ಹಿರಿಮೆ, ಗರಿಮೆ ಹೆಗ್ಗಳಿಕೆಗಳ ಹಂಗಿನಿಂದ ಮಲಿನವಾಗಿರಬಾರದು. ಹೀಗಿರುವ ದೊಡ್ಡವರು ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವುದೇ ಇಲ್ಲ ಬಿಡಿ. ಹುಡುಕುವುದೂ ವ್ಯರ್ಥ ಪ್ರಯತ್ನ. ಗೌರವಿಸುವುದು ಸಂಪ್ರದಾಯ. ಆದರೆ ಡೊಗ್ಗಿ ಸಲಾಮು ಹಾಕುವುದು ಕೇವಲ ಗುಲಾಮಿತನ. ಸೌಜನ್ಯ ಮಾತು, ನಡವಳಿಕೆ ತಪ್ಪಲ್ಲ; ಅದೇ ಮುಖವಾಡ ಧರಿಸುವುದು ತಪ್ಪು. ನಮಸ್ಕರಿಸಿಕೊಳ್ಳುವವನಿಗೆ ಮೊದಲ ಅರ್ಹತೆ, ನಮಸ್ಕರಿಸಿದವನಿಗೂ ಅಂಥದೇ ಗೌರವ ತೋರಬೇಕೆನ್ನುವುದು. ವ್ಯಕ್ತಿಗಳಲ್ಲೆ ದೊಡ್ಡೋನು, ಸಣ್ಣೋನು ಎಂಬುದಿಲ್ಲ. ಅದೇ ತಾನೆ ಹುಟ್ಟಿದ ಶಿಶು ಮತ್ತು ಇನ್ನೇನು ಕೊನೆಯ ಬಿಕ್ಕು ಕಾಣಿಸಿಕೊಂಡ ವ್ಯಕ್ತಿಯನ್ನೂ ವೈಜ್ಞಾನಿಕವಾಗಿ 'ಹೋಮೋ ಸೆಪಿಯನ್ಸ್' ಎಂಬ ಹೆಸರಿನಲ್ಲೆ ಕರೆಯುವುದು. ಹೀಗಿದ್ದಾಗ ಮತ್ತೆಲ್ಲಿಂದ ಬಂತು ಈ ಏಣಿಶ್ರೇಣಿ? ವ್ಯಕ್ತಿ ಸಮಾಜದಲ್ಲಿ ಉನ್ನತ ಸ್ಥಾನ ಮಾನ ಹೊಂದಿರಬಹುದು ಅವನಿಗೆ ಪಾದಮುಟ್ಟಿಯೇ ನಮಸ್ಕರಿಸಿಯೇ ಗೌರವ ತೋರಿಸಬೇಕೆಂದೇನಿಲ್ಲ. ಸೌಜನ್ಯದಿಂದ ನಮಸ್ಕಾರ ಎಂದರೂ ಸಾಕು. ಪಾದಮುಟ್ಟಿ ನಮಸ್ಕರಿಸಿಕೊಳ್ಳುವ ವ್ಯಕ್ತಿಗೆ ಮತ್ತೊಂದು ಅರ್ಹತೆ, ಹಾಗೆ ನಮಸ್ಕರಿಸಿದ ವ್ಯಕ್ತಿಯ ಪಾದಗಳನ್ನೂ ಅಷ್ಟೆ ಗೌರವ, ಭಯ, ಭಕ್ತಿಯಿಂದಲೇ ನಮಸ್ಕರಿಸುವ ತೀರಾ ಅನಿವಾರ್ಯವಾದ ಸೌಜನ್ಯವಿರಬೇಕು. ಹಾಗೆ ಮಾಡಿದಾಗ ಮಾತ್ರ ನಮಸ್ಕರಿಸಿಕೊಂಡ ವ್ಯಕ್ತಿಗೂ ಒಂಚೂರು ಬೆಲೆ ಬರುತ್ತೆ. ನಮಸ್ಕರಿಸಿದವನ ಶ್ರಮವೂ ತಿಳಿಯುತ್ತೆ. ಇನ್ನೂ ಒಂದು ಮಾತು; ಇದು ಪುಟ್ಟ ಕಂದಮ್ಮಗಳಿಗೆ ಅನ್ವಯಿಸದು. ಹಾಗೆ ಪಾದಗಳನ್ನು ಕನಿಷ್ಠವೆಂದೇ ಭಾವಿಸುವ ಒಂದು ಮನೋಧರ್ಮವಿದೆ. ಪಾದಗಳೇ ಕನಿಷ್ಠವೆಂದೇ ಭಾವಿಸುವ ಕನಿಷ್ಠ ವ್ಯಕ್ತಿತ್ವದ ಹಾಗೂ ನಮಸ್ಕರಿಸಿಕೊಂಡೇ ದೊಡ್ಡೋರು ಎಂದು ಭ್ರಮಿಸುವ ಜನರ ಪಾದಗಳನ್ನು ಹಿಡಿದರೆ ಯಾವ ಮತ್ತು ಯಾರ ಪಾಪ ಪರಿಹಾರವಾಗುತ್ತೊ? ಬಹುತೇಕರು ನನ್ನಂತಾ ಸಾಮಾನ್ಯರು ತಿಳಿದಂತೆ ದೇಹದ ಯಾವ ಅಂಗವೂ ಶ್ರೇಷ್ಠವೂ ಅಲ್ಲ; ಕನಿಷ್ಠವೂ ಅಲ್ಲ. ಕಿರುಬೆರಳಿಗೆ ಸಿಗುವ ಮಾನ ಎಲ್ಲದಕ್ಕೂ ಸಹಜವಾಗಿಯೇ ಇದೆ. ಧಾಮರ್ಿಕವಾಗಿ ಪ್ರಭಾವ ಮೆರೆಯುವ ಜನರನ್ನು (ಬೇಕಾದರೆ ಸ್ವಾಮಿಗಳು, ಜಗದ್ಗುರುಗಳು, ಧರ್ಮಗುರುಗಳು ಎಂದೂ ತಿಳಿಯಲೂ ಅಡ್ಡಿಯಿಲ್ಲ) ತಲೆ ಮೇಲೆ ಹೊತ್ತು ತಿರುಗುವ ಮೂರ್ಖತನ, ಮೂಢತೆಗೆ ಧರ್ಮ, ನೀತಿ, ನಿಯಮ, ಪಾಪ, ಪುಣ್ಯದ ಪೌಡರು ಉಗ್ಗುವ ಮಂದಿಯಿದ್ದಾರೆ. ಜಾತಿ, ಧರ್ಮಗಳ ಸೃಷ್ಟಿ ಜೀವವಿಕಾಸ ಸಿದ್ಧಾಂತದಂತೆ, ಮನುಷ್ಯನ ರೂಪು ತಳೆಯುವಿಕೆಯೊಂದಿಗೇ ಆದದ್ದಲ್ಲ. ಅವೆಲ್ಲಾ ಅಂಜುಬುರುಕ ನಮ್ಮ ಹಳೆಯ ತಲೆಮಾರುಗಳ ಮುತ್ತಜ್ಜರ ಸೃಷ್ಟಿ. ಅಪ್ಪ ನೆಟ್ಟ ಆಲದ ಮರಕ್ಕೇ ಜೋತು ಬೀಳುವುದು ತಪ್ಪು ಎಂದು ತಿಳಿಹೇಳುವ ಬುದ್ಧಿವಂತರಿಗೆ ಸಾವಿರಾರು ವರ್ಷಗಳಷ್ಟು ಹಳೆಯದಾದ, ತಳಬುಡವಿಲ್ಲದ, ಬರೀ ಮೇಲು, ಕೀಳು, ದ್ವೇಷ, ಅಸೂಯೆ ಹುಟ್ಟಿಸುವ ಜಾತಿ, ಧರ್ಮ, ದೇವರು, ಪೂಜೆ, ಪುನಸ್ಕಾರ, ಪ್ರಾರ್ಥನೆ, ಹರಕೆ ಇವು ಯಾಕೆ ಬೇಕೆನಿಸುತ್ತಾವೊ? ಬಹು ಸೋಜಿಗದ ಸಂಗತಿ. ಅದಕ್ಕೆ ನನಗೆ ಮತ್ತೆ ಕಾಡುವುದು ಹಸುಕಂದಮ್ಮಗಳ ಪುಟ್ಟ ಪಾದಗಳು. ನಮ್ಮ ಅಹಂ, ದೊಡ್ಡಸ್ಥಿಕೆಯ ಮುರಿಯಲು ಪುಟ್ಟ ಪಾದಗಳಿಗೆ ಹಣೆ ಹಚ್ಚಬೇಕು. ಅವುಗಳನ್ನು ಹಾಗೆ ಸುಮ್ಮನೆ ಕಣ್ಣಿಗೊತ್ತಿಕೊಳ್ಳಬೇಕು. ಯಾವ ದೇವರು, ಧರ್ಮ, ಜಾತಿ, ಧರ್ಮಗುರು ಬೇಕಿಲ್ಲ ನಮ್ಮ ಮನವ ಸಂತೈಸಲು ತನುವ ತಣಿಸಲು; ಸಾಕು ನಸುನಗುವ, ಅಳುವ, ಪಿಳಿಪಿಳಿ ಕಣ್ಣು ಬಿಡುವ, ಕೈ ಕಾಲು ಅತ್ತಿತ್ತ ಆಡಿಸಿ ನಲಿಯುವ ಹಸುಕಂದಮ್ಮಗಳ ಪುಟ್ಟ ಪಾದಗಳು. ಇರುವ ಒಂದೇ ಜಲುಮದಿ ನಾವು ನಾವಾಗಿ ಬದುಕಿ, ನಮ್ಮತನ ಮೆರೆಯಲು, ನಮಗೂ ಮನುಷ್ಯರೆಂಬ ಒಂದಷ್ಟು ವೈಯಕ್ತಿಕ ಗೌರವವಿದೆಯೆಂಬ ಕಾರಣಕ್ಕೆ ಯಾರಿಗೋ ಬಾಗಿ ಬೆನ್ನು ಉಳುಕಿಸಿಕೊಳ್ಳುವುದಕ್ಕಿಂತ, ಅವನ ಉಪೇಕ್ಷೆಗೆ ಒಳಗಾಗುವುದಕ್ಕಿಂತ ಪುಟ್ಟ ಪಾದಗಳ ಮೇಲೆ ಹಣೆ ಹಚ್ಚಿ ನೋಡಿ, ಒಂದೆರಡು ಕ್ಷಣಬಿಟ್ಟು ಕಣ್ಣಿಗೊತ್ತಿಕೊಂಡು ನೋಡಿ... ಎಲ್ಲವನ್ನೂ ಅಕ್ಷರಗಳಲ್ಲೆ ಹೇಳುವುದೂ ಅಸಾಧ್ಯ!

-ಕಲಿಗಣನಾಥ ಗುಡದೂರು

ಭಾನುವಾರ, ಮಾರ್ಚ್ 15, 2009

ಜೋಗಿ ಸರ್ ಬರೆದ 'ಕ್ಷಮಿಸಿ'ಗೆ ಪ್ರತಿಕ್ರಿಯೆ


ಪಾಠ ಕಲಿಸುವ ಸಮಯ...
ಜೋಗಿ ಸರ್, ಬಲು ಜೋರು ಬರೆದಿದ್ದೀರಿ. ಇನ್ನೂ ನಾವೆಲ್ಲಾ ಒಂದಾಗಿ ಈ ಸನಾತನಿ ಸುಡೋ ಹಿಂದೂವಾದಿಗಳಿಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಕಲಾವಿದ, ಸಾಹಿತಿ, ಹೋರಾಟಗಾರ, ಪತ್ರಕರ್ತರನ್ನು ಅಷ್ಟಾಗಿಯೂ ಜನಸಾಮಾನ್ಯರು ಅವನ ಜಾತಿಯಿಂದ ಗುರುತಿಸಲು ಇಷ್ಟಪಡಲಾರರು. ಅದರಲ್ಲೂ ಲೆಜೆಂಡ್ಗಳನ್ನು ಅದ್ಹೇಗೆ ಜಾತಿ, ಜನಾಂಗ, ಬಣ್ಣ, ಪ್ರದೇಶ, ಧರ್ಮ, ದೇಶ ಎಂದು ಗುರುತಿಸಲಾದೀತು. ಈ ಮೂರ್ಖರು ಕೇವಲ ದಕ್ಷಿಣ ಕನ್ನಡದಲ್ಲಷ್ಟೆ ಅಲ್ಲ; ಅಂಥವರನ್ನು ಪೋಷಿಸುವ ಪಕ್ಷ, ಸಕರ್ಾರಗಳೇ ಇರುವಾಗ ಇವರು ಇಲ್ಲದ ಜಾಗೆಯಿಲ್ಲ. ಕೆಲವೇ ದಿನಗಳಲ್ಲಿ ಮಹಾನ್ ರಾಷ್ಟ್ರ ನಾಯಕರ ಸಾಲಿನಲ್ಲಿ ಯಡಿಯೂರಪ್ಪ, ಅಡ್ವಾಣಿ, ವಾಜಪೇಯಿ, ಮೋದಿ, ಬಾಳಠಾಕ್ರೆ, ಮುತಾಲಿಕ್, ತೊಗಾಡಿಯಾ ಸೇರಿದಂತೆ ಸಂಘ ಪರಿವಾರದ ಮುಖಂಡರ ಫೋಟೊಗಳನ್ನು ಎಲ್ಲಾ ಸಕರ್ಾರಿ ಮತ್ತು ಸಾರ್ವಜನಿಕ ಕೇಂದ್ರ ಹಾಗೂ ಕಚೇರಿಗಳಲ್ಲಿ ಕಡ್ಡಾಯವಾಗಿ ಜೋತುಬೀಳಿಸಬೇಕು ಎಂಬ ಆರ್ಡರ್ ಬಂದರೂ ಅಚ್ಚರಿಪಡಬೇಕಿಲ್ಲ. ನಿಮ್ಮ ನೇರ, ಇರಿಯುವ ಬರೆಹದಿಂದ ನಮ್ಮೆಲ್ಲರಲ್ಲೂ ಚೈತನ್ಯ ತುಂಬಿದೆ. ಕೇವಲ ಬರೆಹದ ಮೂಲಕ ಸಾವಿರ ಪುಟಗಳಲ್ಲಿ ಬರೆದರೂ ಇಂಥಹ ಮೂಢರ ಮನಸ್ಸು ಬದಲಾದೀತು ಎಂದು ಬಯಸುವುದೂ ತಪ್ಪು. ಸಾಧ್ಯವಿದ್ದರೆ ನಾವೆಲ್ಲರೂ ಬೀದಿಗಿಳಿದು ಸನಾತನಿಗಳ ಕಿವಿಹಿಂಡುವ ಕಾಲ ಸನ್ನಿಹಿತವಾಗಿದೆ. ಇಲ್ಲದಿದ್ದರೆ ಕೇವಲ ಹೇಮಂತ ಹೆಗಡೆಗೆ ಕೇಳಿದ ಪ್ರಶ್ನೆ ನಮ್ಮ ಪ್ರತಿ ಮಾತಿಗೂ, ಅಕ್ಷರ, ಸೀನು, ಉಗುಳು ಏನೆಲ್ಲಾ ಕ್ರಿಯೆಗಳಿಗೂ ಅನ್ವಯಿಸಿದರೂ ಅಚ್ಚರಿಪಡಬೇಕಿಲ್ಲ. ನೋಡಿ, ಆಕ್ಟಿವಿಸ್ಟ್ ರೀತಿಯಲ್ಲಿ ಕೆಲಸ ಮಾಡಿದರೆ ಮಾತ್ರ ಏನಾದರೂ ಸಾಧ್ಯವಾದೀತು. ಇಲ್ಲವಾದರೆ ನಮ್ಮನ್ನೆಲ್ಲಾ ಏನೋ ಬರೆತಾವೆ... ಬೊಗಳ್ತಾವೆ... ನಮಗೇನೂ ಆಗಲ್ಲ ಎಂದು ಉಗುಳಿದರೂ ಮುಖ ಒರೆಸಿಕೊಳ್ಳುವ ಭಂಡರು ಭಾವಿಸುವುದರಲ್ಲಿ ಅನುಮಾನವಿಲ್ಲ. ಅನ್ನಿಸಿದ್ದನ್ನೆಲ್ಲಾ ಬರೆದುಬಿಟ್ಟೆ...
-ಕಲಿಗಣನಾಥ ಗುಡದೂರು

ಸೋಮವಾರ, ಮಾರ್ಚ್ 9, 2009

ನಮ್ಮೆಲ್ಲರ ನಲ್ಮೆಯ ಮೇಸ್ಟ್ರು


ಬೈ ಟು ಟೀ ಕುಡಿಯುತ್ತಾ... ಲಂಕೇಶ ನೆನಪು!



ಲಂಕೇಶ ಇವತ್ತು ಇಲ್ಲ ಎಂದೇ ಎಲ್ಲರೂ ಮಾತನಾಡುವುದು ಉಂಟು. ಹೈದರಾಬಾದ್ ಕನರ್ಾಟಕ ಪ್ರದೇಶದ ಎಲ್ಲ ಆಕಾರ, ವಿಕಾರ ಹೊಂದಿದ ಸಿಂಧನೂರಿನ ಸುಕಾಲಪೇಟೆ ರಸ್ತೆಗುಂಟ ನಾಲ್ಕು ಹೆಜ್ಜೆ ಹಾಕಿದರೆ ಎಡಕ್ಕೆ ನಾಲ್ಕಾರು ತಳ್ಳುಗಾಡಿಗಳಲ್ಲಿ ಕಾಯಿಪಲ್ಯೆ ಮಾರುವವರ ಮಧ್ಯೆ ಮಸಾಲೆ ಸಾಮಾನು ಮಾರುವ ಮತ್ತೊಂದು ತಳ್ಳುಗಾಡಿ ಕಣ್ಣಿಗೆ ಕಾಣುತ್ತದೆ. ಅಲ್ಲಿ ಈಗಲೂ ನಮ್ಮ ನಿಮ್ಮೆಲ್ಲರ ಪ್ರೀತಿಯ ಲಂಕೇಶ ಮೇಸ್ಟ್ರು ಜೀವಂತವಿದ್ದಾರೆ. ಇಂದಿಗೂ ಉಸಿರಾಡುತ್ತಾರೆ. ಹಿಂದಿನ ಮೆಣಸಿನಕಾಯಿ ಮಾರುಕಟ್ಟೆಯ ಘಾಟಿಗೂ ಹೆದರದೆ ಪುಟ್ಟ ತಳ್ಳುಗಾಡಿಯಲ್ಲಿ ಠಿಕಾಣಿ ಹೂಡಿದ್ದಾರೆ ಲಂಕೇಶ. ಏಳನೇ ಇಯತ್ತೆ ಓದಿದೋರು ಅಂದರೆ ಅನಕ್ಷರಸ್ಥ ಎಂಥಲೇ ತಿಳಿಯುವ ಸಂಪ್ರದಾಯದಲ್ಲಿ ಏಳನೇ ಇಯತ್ತೆ ಓದಿ, ಲಂಕೇಶರ ಬಗ್ಗೆ ಅಪಾರ ಪ್ರೀತಿ ಹೊಂದಿದ ಮಸಾಲೆ ಸಾಮಾನು ಮಾರುವ ಮುನ್ನಾ ಎಂಬ ಪ್ರೀತಿಯ ಹುಡುಗನಿರುವುದೇ ನನ್ನಂಥವ ಅದೆಷ್ಟು ಜೀವಂತಿಕೆಯಿಂದ ಬದುಕುತ್ತಿರುವುದು. ಲಂಕೇಶರ ದಿಟ್ಟತನಕ್ಕೂ ನಮ್ಮ ಮುನ್ನಾ ಮುದುಡಿಕೊಂಡೇ ಇರುವ, ಮಾತನಾಡುವ ಪರಿ ಅಜಗಜಾಂತರ. ಲಂಕೇಶರ ಜನುಮದಿನದಂದು ಅವರ ನೆನಪನ್ನು ಯಾರೊಂದಿಗೆ ಹಂಚಿಕೊಳ್ಳಲಿ ಎಂದು ಯೋಚಿಸಿದಾಗ ಥಟ್ಟನೆ ಹೊಳೆದವನು ಗೆಳೆಯ ಮುನ್ನಾ. 'ಎಲ್ಲಿ ಇದ್ದಿ ಮುನ್ನಾ? ನನ್ನೊಂದಿಗೆ ಬೈ ಟು ಟೀ ಕುಡಿಯಲು ಬರ್ತಿಯಾ?' ಕೇಳಿದೆ. ಅತ್ಯಂತ ಸಂಭ್ರಮದಿಂದಲೇ ಬಂದ ಮುನ್ನಾ ಕಣ್ಣು, ಮನಸ್ಸುಗಳಲ್ಲಿ ಲಂಕೇಶ ತುಳುಕಾಡುತ್ತಿದ್ದರು. ಬೈ ಟು ಟೀಗೆ ಆರ್ಡರ್ಮಾಡಿ ಮಾತಿಗೆಳೆದೆ. ನನಗೆ ದಕ್ಕಿದ ಲಂಕೇಶ ಮತ್ತಷ್ಟು ಅಜಾನುಬಾಹುವಿನಂತೆ ಕಂಡರು ಮುನ್ನಾ ಮನಬಿಚ್ಚಿ ಮಾತನಾಡಿದಾಗ. ಏಳನೇ ತರಗತಿಗೆ ನಾನು ಓದಿಗೆ ಶರಣು ಹೊಡೆದೆ. ನನ್ನ ಚಿಕ್ಕಪ್ಪ ಅಬ್ದುಲ್ಸಾಬ್ ಕಿರಾಣಿ ಅಂಗಡಿಯಲ್ಲಿ ಕೈ ಬಾಯಿ ಕೆಲಸ ಕೇಳುತ್ತಿದ್ದೆ. ಆತ ವಿವಿಧ ಪತ್ರಿಕೆಗಳನ್ನು ತರಿಸುತ್ತಿದ್ದ. ಲಂಕೇಶ ಪತ್ರಿಕೆಯೂ ಒಂದು. ಲಂಕೇಶ ಪ್ರಪಂಚ ಪರಿಚಯವಾಗಿದ್ದು ಆಗಿನಿಂದಲೇ. ಲಂಕೇಶರನ್ನು ಮುನ್ನಾ ಎಷ್ಟು ಹಚ್ಚಿಕೊಂಡಿದ್ದ ಎಂಬುದನ್ನು ಹೇಳಿ ಮತ್ತೆ ಆತನ ಮಾತುಗಳನ್ನು ಓದಲು ಅವಕಾಶ ಕೊಡುವೆ. ಲಂಕೇಶರ ಆತ್ಮಕಥೆ 'ಹುಳಿಮಾವಿನ ಮರ'ವನ್ನು ತರಿಸಿ, ಎರಡ್ಮೂರು ಬಾರಿ ಓದಿದ ಮುನ್ನಾ, ತನ್ನ ಡಗ್ಲಾಸ್ ಸೈಕಲ್ನ್ ಚೈನ್ ಕವರಿನ ಮೇಲೆ ಬರೆಸಿದ್ದು ಯಾವುದೇ ಸಿನಿಮಾದ ಹೆಸರಲ್ಲ ಹೊರತಾಗಿ 'ಹುಳಿಮಾವಿನ ಮರ'. ಅವನ ಸೈಕಲ್ ಕಂಡೊಡನೆ ನನ್ನ ಕಣ್ಣುಗಳು ಮೊದಲು ನೋಡುತ್ತಿದ್ದುದು ಮುನ್ನಾ ಪ್ರೀತಿಯಿಂದ ಬರೆಯಿಸಿದ್ದ 'ಹುಳಿಮಾವಿನ ಮರ'. ಲಂಕೇಶರು ಮುನ್ನಾನನ್ನು ಆವರಿಸಿದ್ದು ಅಷ್ಟಿಷ್ಟಲ್ಲ. ಯಾವುದೇ ವಿಶ್ವವಿದ್ಯಾಲಯದ ಬಹುತೇಕ ಕನ್ನಡ ಸೇರಿದಂತೆ ಇತರೆ ಸಾಹಿತ್ಯದ ವಿದ್ಯಾಥರ್ಿಗಳು ಓದದಷ್ಟು ಲಂಕೇಶರ ಪುಸ್ತಕಗಳನ್ನು ಓದಿದ್ದಾನೆ. ಬರೀ ಪರೀಕ್ಷೆಗಾಗಿ ಕಾಟಾಚಾರಕ್ಕೆಂಬಂತೆ ಓದಿಲ್ಲ. ಓದಿ ತನ್ನ ಜೀವನದಲ್ಲಿ ಎದುರಾದ ಅನೇಕ ಕಷ್ಟ, ನಷ್ಟಗಳನ್ನು ಎದುರಿಸಿದ್ದಾನೆ. ಮತ್ತಷ್ಟು ಉತ್ತಮನಾಗಲು ಯತ್ನಿಸಿದ್ದಾನೆ. ಆತನಿಗೆ ಮೋಡಿ ಮಾಡಿದ್ದು 'ಗುಣಮುಖ' ನಾಟಕ. ಲಂಕೇಶ ಇವತ್ತು ನಮ್ಮೊಂದಿಗೆ ಭೌತಿಕವಾಗಿ ಇರದಿದ್ದರೂ ಅವರ ಕೃತಿಗಳಿವೆ. ಅವರ ವಿಚಾರಗಳಿವೆ ಎಂದೇ ಸ್ವಲ್ಪ ಮಟ್ಟಿಗೆ ಸಮಾಧಾನ ಪಟ್ಟುಕೊಳ್ಳುವ ಮುನ್ನಾ, ಲಂಕೇಶರು, 'ಗುಣಮುಖ' ಹಕೀಂ ಅಲಾವಿಖಾನ್ನಂತೆ ಎಂದು ಅಭಿಮಾನಪಡುತ್ತಾನೆ. ನಾದಿರ್ಷಹಾನ ರೋಗಗ್ರಸ್ತ ಮನಸ್ಸನ್ನು ಗುಣಮುಖಮಾಡಿದ ಹಾಗೆ ಇಂದು ಎಲ್ಲೆಡೆ ಕಾಣುವ ರೋಗಗ್ರಸ್ತ ಮನಸ್ಸುಗಳನ್ನು ಗುಣಮುಖಮಾಡುವ ಕನ್ನಡದ ನೈಜ ಹಕೀಂ ಅಲಾವಿಖಾನ್ ಜೊತೆ ಇರದಿದ್ದರೂ ನಾವೆಲ್ಲರೂ ಹಕೀಂನಂತಾಗುವ ಅನಿವಾರ್ಯತೆಯಿದೆ. ನಾದಿರ್ಷಹಾನಂತೆ ಎಲ್ಲಾ ರೋಗಗ್ರಸ್ತ ಮನಸ್ಸುಗಳು ಗುಣಮುಖವಾದರೆ ಸುತ್ತಲಿನ ಪ್ರಪಂಚ, ಬದುಕು ಎಷ್ಟು ಸುಂದರವಾಗಿರುತ್ತದೆ ಎಂದಾಗ ಮುನ್ನಾನ ಕಣ್ಣುಗಳಲ್ಲಿ ನೂರು ಚುಕ್ಕೆಗಳು ಮಿನುಗಿದವು. ಲಂಕೇಶರ 'ಪಾಪದ ಹೂಗಳು', 'ಕಲ್ಲು ಕರಗುವ ಸಮಯ', 'ಗಿಳಿಯು ಪಂಜರದೊಳಗಿಲ್ಲ', 'ಹುಳಿಮಾವಿನ ಮರ', 'ಟೀಕೆ ಟಿಪ್ಪಣೆ ಭಾಗ-1, ಭಾಗ-2' ಹೀಗೆ ಹಲವು ಕೃತಿಗಳನ್ನು ಓದಿದ ಮುನ್ನಾ ಈಗಲೂ ತಾನು ಹತ್ತಾರು ವರ್ಷಗಳ ಹಿಂದೆ ಓದಿದ್ದನ್ನು ಈಗಲೂ ನಿನ್ನೆ, ಮೊನ್ನೆ ಓದಿದಂತೆ ಅಲ್ಲಿಯ ಘಟನೆ, ಪಾತ್ರಗಳು ಮತ್ತು ಚಿತ್ರಣಗಳನ್ನು ಬಿಚ್ಚಿಡುತ್ತಾನೆ. ಇದೆಲ್ಲಾ ಆಶ್ಚರ್ಯವೆನಿಸಿದರೂ, ತಾನು ಮಾರುವ ಮಸಾಲೆ ಸಾಮಾನುಗಳಿಗಿಂತಲೂ ಹೆಚ್ಚು ನೆನಪು ಇಟ್ಟಿರುವುದು ಲಂಕೇಶರ ಟೀಕೆ ಟಿಪ್ಪಣೆಗಳನ್ನು. 'ಲಂಕೇಶ ನಿನಗೆ ಯಾಕೆ ಇಷ್ಟವಾದರು?' ಎಂದು ಟೀ ಗುಟುಕರಿಸುತ್ತಾ ಕೇಳಿದೆ. ಕುಡಿಯುತ್ತಿದ್ದ ಟೀ ಕಪ್ನ್ನು ಟೇಬಲ್ ಮೇಲಿಟ್ಟು ಟೀ ಆರದಿರಲೆಂದು ಅಂಗೈ ಮುಚ್ಚಿ ಮಾತನಾಡಿದ. ಲಂಕೇಶ ಮನಸ್ಸು ಮಾಡಿದ್ದರೆ ರಾಜನಂತೆ ಬದುಕಬಹುದಾಗಿತ್ತು. ಹಣ, ಅಂತಸ್ತು, ಸ್ಥಾನ ಮಾನಗಳಿಗೆ ಬಡಿದಾಡುವ ಇಂದಿನ ದಿನಗಳಲ್ಲಿ ಲಂಕೇಶ ಒಂದು ಅಪವಾದದಂತೆ ಬದುಕಿದರು. ಅವರ ನಿಸ್ವಾರ್ಥ ಬದುಕು ನನಗೆ ಇಷ್ಟ. ಅವರ ಬರೆಹ ಮತ್ತು ಬದುಕು ಒಂದೇಯಾಗಿದ್ದುದು ಮತ್ತಷ್ಟು ಅವರನ್ನು ಹಚ್ಚಿಕೊಳ್ಳಲು ಕಾರಣ. ಥೇಟ್ ಹಳ್ಳಿಯ ಅನುಭವಿ ವ್ಯಕ್ತಿಯಂತೆಯೇ ಲಂಕೇಶ ಕೊನೆಯವರೆಗೂ ಬದುಕಿದರು. ಅವರ 'ಮುಟ್ಟಿಸಿಕೊಂಡವರು' ಕಥೆ ಓದಿದ ನಂತರವೇ ನನ್ನ ಮನದ ಮೂಲೆಯಲ್ಲಿದ್ದ ಚೂರು ಅದೆಂಥದೊ 'ಅವರನ್ನು, ಅಂಥವರನ್ನು' ಮುಟ್ಟಿಸಿಕೊಳ್ಳಬಾರದೆನ್ನುವ ಭಾವನೆ ಬದಲಾಗಿದ್ದು. ಮತ್ತೊಂದು ಕಥೆ 'ಬಾಗಿಲು' ಕೂಡ ಅಷ್ಟೆ. ಅರ್ಹರಿಗೆ ಸಹಾಯ ಮಾಡುವುದು ತಪ್ಪಲ್ಲ; ಆದರೆ ಸಹಾಯಕ್ಕೆ ಮುನ್ನಾ ಪೂವರ್ಾಪರ ವಿಚಾರಮಾಡಬೇಕೆನ್ನುವ ಲಂಕೇಶರ 'ಬಾಗಿಲು' ಕಥೆಯ ಥೀಮ್ ನನ್ನನ್ನು ಈಗಲೂ ಕಾಡುತ್ತಿರುತ್ತದೆ. ಸಮಾಜದ ಓರೆ ಕೋರೆ ತಿದ್ದುವಲ್ಲಿ ಲಂಕೇಶರ ಪಾತ್ರ ಅದ್ವಿತೀಯ ಎಂಬುದು ಕೇವಲ ಬಾಯುಪಚಾರದ ಮಾತಲ್ಲ. ಅವರ ಒಂದು ಲೇಖನಕ್ಕೆ ಸಕರ್ಾರ ಉರುಳಿಸುವ ಶಕ್ತಿಯಿತ್ತು ಎಂಬುದು ಹಿಂದಿನ ಫ್ರಾನ್ಸ್ ಮಹಾಕ್ರಾಂತಿಯನ್ನು ನೆನಪಿಸುತ್ತದೆ. ಅವರ ಬರವಣಿಗೆಯಲ್ಲಿ ಸತ್ಯನಿಷ್ಠತೆ, ಜೀವಂತಿಕೆ, ಜೀವಪರತೆ, ನಿಷ್ಠುರತೆ ಇಂದಿನ ಪತ್ರಿಕೆಗಳ ವರದಿಗಾರರು, ಸಂಪಾದಕರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಪ್ರೀತಿಯಿಂದಲೇ ತನ್ನ ಕಳಕಳಿ ಹೊರಹಾಕುತ್ತಾನೆ ಮುನ್ನಾ. ಲಂಕೇಶ ಪತ್ರಿಕೆಯ ಭಾಗವಾಗಿದ್ದ ಪುಂಡಲೀಕಶೇಠ್ ಬರೆಯುತ್ತಿದ್ದ 'ಹುಬ್ಬಳ್ಳಿಯಾಂವ' ಅಚ್ಚುಮೆಚ್ಚು. ನನ್ನಂಥವವನಿಗೆ ಎಲ್ಲಿಗೂ ಹೋಗಲು ಆಗಲ್ಲ. ಲಂಕೇಶರ ಟೀಕೆ ಟಿಪ್ಪಣಿ ಮೂಲಕ ಜಗತ್ತಿನ ವಿವಿಧ ಪ್ರದೇಶ, ಜನಾಂಗ, ವಿಭಿನ್ನ ಸಂಸ್ಕೃತಿಗಳನ್ನು ಪರಿಚಯಿಸಿದ ಜೊತೆಗೆ ನನ್ನ ಅಲ್ಪ ಫಾರ್ಮಲ್ ಓದಿಗೆ ಇನ್ಫಾರ್ಮಲ್ ಆಗಿ ಜ್ಞಾನ ಹೆಚ್ಚಿಸಿದವು. 'ನೀಲು' ಬಗ್ಗೆ ಪ್ರತಿ ಸಂಚಿಕೆಯಿಂದ ಮತ್ತೊಂದಕ್ಕೆ ಕುತೂಹಲ ಇರುತ್ತಿತ್ತು. 'ನಿಮ್ಮಿ ಕಾಲಂ' ಬರೆಯುತ್ತಿದ್ದುದು ಹುಡುಗಿ ಎಂದೇ ತಿಳಿದಿದ್ದೇ ಎಂದು ಮುನ್ನಾ ಮುಗುಳ್ನಕ್ಕ. ನಂತರ ಗೊತ್ತಾಗಿ... ಏನೂ ಹೇಳದೆ ಕಿರುನಗೆ ಬೀರಿದ. ಲಂಕೇಶರ ಬರೆಹಗಳಿಂದ ಅಷ್ಟೊಂದು ಪ್ರೇರಣೆ, ಪ್ರಭಾವಕ್ಕೆ ಒಳಗಾಗಿಯೂ ಯಾಕೆ ಬರೆಹಗಾರನಾಗಲಿಲ್ಲ? ಎನ್ನುವ ಪ್ರಶ್ನೆಗೆ ನನ್ನ ನಿರೀಕ್ಷೆ ಮೀರಿ ಉತ್ತರಿಸಿದ. 'ನನಗೆ ಊಟ ಮಾಡೋದು ಗೊತ್ತು. ಅಡುಗೆ ಮಾಡಲು ಬರೊಲ್ಲ' ಎಂದು ನನ್ನಂಥವ ಬರೆಹಗಾರನಾಗಿ ಏನೆಲ್ಲಾ ಬರೆಯಬೇಕೆಂಬ ಗರ್ವ, ಅಭಿಮಾನವನ್ನು ಟೀ ಕುಡಿದ ಖಾಲಿ ಕಪ್ಪನ್ನು ಕೆಳಗೆ ಇಟ್ಟಂತೆ ಇಟ್ಟುಬಿಟ್ಟ. ಲಂಕೇಶರು ಜೀವಂತವಿದ್ದಾಗಲೇ ಅವರನ್ನು ಖುದ್ದಾಗಿ ನೋಡಬೇಕೆಂಬ ಆಸೆಯಿತ್ತು. ಅದು ನನ್ನಂಥವನಿಗೆ ಅಸಾಧ್ಯವೆನಿಸಿತು. ದುಡಿಯುವುದೇ ಹತ್ತಿಪ್ಪತ್ತು ರೂಪಾಯಿ. ಇನ್ನು ನೂರಾರು ರೂಪಾಯಿ ಖಚರ್ುಮಾಡಿ ಬೆಂಗಳೂರಿಗೆ ಹೋಗಿ ಭೇಟಿಯಾಗುವುದು ಕನಸಿನ ಮಾತೇ ಆಗಿತ್ತು. ಕಡೆ ಅವರೇನಾದರೂ ಬಂದಿದ್ದರೆ ನೋಡಬಹುದಿತ್ತು. ಇರಲಿ ಬಿಡಿ. ಅವರನ್ನು ನೋಡಲೇಬೇಕೆಂದೇನೂ ಇಲ್ಲ. ಅವರು ತೀರಿಕೊಂಡ ಸುದ್ದಿಯನ್ನು ಪೇಪರ್ನಲ್ಲಿ ಓದಿದ ಕ್ಷಣವೇ ಕಣ್ಣುಗಳು ತೇವಗೊಂಡವು. ನನಗೆ ಮತ್ತು ನಮ್ಮ ಮನೆಯ ಕಂಬವೇ ಆಗಿದ್ದ ಲಂಕೇಶ ಇನ್ನಿಲ್ಲವಾದರು ಎಂಬಂತೆ ಅನ್ನಿಸಿತು. ಛೆ... ನಮ್ಮ ಮನೆಯ ಸದಸ್ಯರು ತೀರಿಕೊಂಡಾಗ ಅಷ್ಟು ದುಃಖವಾಗಿರಲಿಲ್ಲ. ಮುಖ ತಗ್ಗಿಸಿದ ಮುನ್ನಾ ಖಾಲಿ ಕಪ್ಪು ನೋಡುತ್ತಾ ಕುಳಿತ. ಹೆಗಲ ಮೇಲೆ ಅಂಗೈಯಿಟ್ಟು 'ಬಾ ಹೊರಗೆ ಹೋಗೋಣ...' ಎಂದೆ. ಮತ್ತೆ ಅವನು ಸುಕಾಲಪೇಟೆಯ ಮಸಾಲೆ ಸಾಮಾನು ಮಾರುವ ತಳ್ಳುಗಾಡಿಯತ್ತ ನಡೆದ... ಅವನು ಹೋದ ಹಾದಿಯನ್ನೇ ಕೆಲ ಕಾಲ ದಿಟ್ಟಿಸುತ್ತಾ ನಿಂತೆ. ಲಂಕೇಶ ಅವನಲ್ಲಿ... ಇನ್ನೂ ಹಲವರಲ್ಲಿ ಮೈ ಚರ್ಮದಂತೆ ಇದ್ದಾರೆ ಅಂತ ಅನ್ನಿಸಿತು.


-ಕಲಿಗಣನಾಥ ಗುಡದೂರು

ಶನಿವಾರ, ಫೆಬ್ರವರಿ 28, 2009

'ಮಾಮೂಲಿ ಗಾಂಧಿ' ಮಾ.1ರಂದು ಬಿಡುಗಡೆಯಾಗುತ್ತಿದೆ...





ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. 'ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...' ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಮಾ.1,2009ರಂದು 'ಮಾಮೂಲಿ ಗಾಂಧಿ' ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ ಅನುಭವಿಸಿದ ತಲ್ಲಣಗಳ ಮರೆಯಲು 'ಮಾಮೂಲಿ ಗಾಂಧಿ' ಕಥೆಗಳನ್ನು ರಚಿಸಿದ್ದೇನೆ. ಇಲ್ಲಿ ಬರೆದ ಬಹುತೇಕ ಕಥೆಗಳು ಹೊಚ್ಚ ಹೊಸವು. ಮೊದಲನೇ ಕಥಾ ಸಂಕಲನ 'ಉಡಿಯಲ್ಲಿಯ ಉರಿ' ಇನ್ನೂ ಈಗಲೂ ತನ್ನ ಕಿಚ್ಚನ್ನು ಹೊತ್ತಿಸುತ್ತಿದೆ ಎಂಬುದಕ್ಕೆ ಫೆ.26ರಂದು 'ಸಂಯುಕ್ತ ಕನರ್ಾಟಕ' ಪತ್ರಿಕೆಯ ಕಥಾಲೋಕ ಅಂಕಣದಲ್ಲಿ ಹಿರಿಯ ಕಥೆಗಾರ ಮಹಾಬಲಮೂತರ್ಿ ಕೊಡ್ಲೆಕೆರೆ ಅವರು ಉಡಿಯಲ್ಲಿಯ ಉರಿ ಬಗ್ಗೆ ಮತ್ತೊಮ್ಮೆ ಆಪ್ತವಾಗಿ ಬರೆದು, ನನ್ನಂತ ಕಥೆಗಾರರ ಕಥೆಗಳನ್ನು ಓದುವ, ವಿಮಶರ್ಿಸುವ ಹೃದಯವಂತಿಕೆ ಹಿರಿಯರಲ್ಲಿ ಬೆಳೆಯಬೇಕು ಎಂಬುದನ್ನು ಹೇಳಿದ್ದಾರೆ. ಎರಡನೇ ಕಥಾ ಸಂಕಲನ 'ಮತಾಂತರ' ಪ್ರತಿಗಳಿಗಾಗಿ ಈಗಲೂ ಅನೇಕರು ಕೇಳುತ್ತಿರುತ್ತಾರೆ. ಆದರೆ ಪ್ರತಿಗಳೆಲ್ಲಾ ಮುಗಿದಿವೆ. ಎರಡು ಕಥಾ ಸಂಕಲನಗಳಲ್ಲಿದ್ದ ಕಥೆಗಳಿಗಿಂತ ಒಂದಷ್ಟು ಮಟ್ಟಿಗೆ ಕಥಾ ಹಂದರದಲ್ಲಿ ಹೊಸತನ ಸಾಧಿಸುವ ಪ್ರಯತ್ನ 'ಮಾಮೂಲಿ ಗಾಂಧಿ' ಕಥಾಸಂಕಲನದಲ್ಲಿ ಮೂರ್ತ ರೂಪ ತಾಳಿದೆ. ಫೆಬ್ರುವರಿ-09 ಮಯೂರದಲ್ಲಿ 'ಕನ್ನಡಿಯೊಳಗಿನ ಚಿತ್ರಗಳು' ಕಥೆ ಪ್ರಕಟವಾದಾಗ, ಹಿಂದೆ ಬರೆದ ಎಲ್ಲ ಕಥೆಗಳಿಗಿಂತ ತೀರಾ ಭಿನ್ನವಾಗಿ ಬರೆದಿದ್ದಿ. ರೀತಿಯ ಹೊಸತನ ಕನ್ನಡ ಕಥಾ ಲೋಕಕ್ಕೆ ಅವಶ್ಯ ಎಂಬುದನ್ನು ಅನೇಕ ಗೆಳೆಯರು ನನ್ನೊಂದಿಗೆ ಹಂಚಿಕೊಂಡಿದ್ದರು. ಕಥೆ ಇನ್ನೇನು ತಿಂಗಳ ಕಥೆಯಾಗಿ ಆಯ್ಕೆಯಾಗುತ್ತೆ ಎಂದೇ ಹಲವು ಗೆಳೆಯರು ಕನಸು ಕಟ್ಟಿದ್ದರು. ರನ್ನರ್ ಅಪ್ಗೆ ಸಂತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಥೆಯ ಬಗ್ಗೆ ಹಿರಿಯ ವಿಮರ್ಷಕರಾದ ಎಚ್.ಎಸ್.ರಾಘವೇಂದ್ರರಾವ್ ಬರೆದದ್ದು ಹೀಗೆ... "ಅತಿ ನಿಕಟವಾದ ವರ್ತಮಾನವನ್ನು ತೆಗೆದುಕೊಂಡು ಕಥೆ ಬರೆಯುವುದು ದೊಡ್ಡ ಸವಾಲು. 'ಕನ್ನಡಿಯೊಳಗಿನ ಚಿತ್ರಗಳು' ಕಥೆಯು ಇಂತಹ ಸವಾಲನ್ನು ಸ್ವೀಕರಿಸುತ್ತದೆ. ಇದರಲ್ಲಿ, ಕಲಾವಿದನೂ ಆದ ನಕ್ಸಲೀಯನು ತನ್ನ ಕಲೆ ಮತ್ತು ಮಾನವೀಯತೆಗಳ ಮೂಲಕ ಎಲ್ಲರನ್ನೂ ಆಕಷರ್ಿಸುತ್ತಾನೆ. ಆದರೆ, ಅವನ ವರ್ತನೆಯ ಹಿಂದೆ ಯಾವುದೇ ಅಜೆಂಡಾ ಕಾಣಿಸುವುದಿಲ್ಲ. ಬದಲಾಗಿ ಅಲ್ಲಿ ಹುಂಬವೆನ್ನಿಸುವ ಒಳ್ಳೆಯತನವಿದೆ. ವ್ಯವಸ್ಥೆಯ ಕ್ರೌರ್ಯವು ಎಲ್ಲರಿಗೂ ತಿಳಿದಿರುವುದೇ. ಆದರೆ ಕಥೆಯಲ್ಲಿ ಭೀಭತ್ಸ, ಮಾನವತೆ ಮತ್ತು ಕ್ರೌರ್ಯಗಳ ಓವರ್ಡೋಸ್ ಇರುವುದರಿಂದ ಕಥೆಯ ವಾಚನೀಯತೆಯು ಕಡಿಮೆಯಾಗುತ್ತದೆ. ಆದರೂ ಇದು ಹಲವು ಸಾಧ್ಯಗಳನ್ನು ಪಡೆದಿರುವ ಕಥೆ.' ಇನ್ನೂ ಉಳಿದ ಎಲ್ಲ ಕಥೆಗಳ ಬಗ್ಗೆ ಹೀಗೆ ಹೇಳಲಾಗಿದ್ದರೂ ನನ್ನನ್ನು ಬಹುವಾಗಿ ಕಾಡಿ ಬರೆಸಿದ ಕಥೆಯೆಂದರೆ 'ಎರಡು ಪಾರಿವಾಳಗಳು'. ಅಬ್ಬಾ ಕಥೆಯನ್ನು ನಾನೇ ಬರೆದನೊ? ಇಲ್ಲಾ ಎರಡು ಪಾರಿವಾಳಗಳೇ ಬರೆಯಿಸಿದವೊ? ಗೊತ್ತಿಲ್ಲ. ಯುದ್ಧೋತ್ಸಾಹಿ ಮನಸ್ಸುಗಳ ಮುಂದೆ ಹಲವು ಪ್ರಶ್ನೆಗಳ ಜೊತೆಗೆ ಕಣ್ಣ ಮುಂದೆಯೇ ಮನುಷ್ಯ ಸಹಜ ಪ್ರೀತಿಯ ದಾರಿಯನ್ನು ಹುಡುಕಿವೆ ಎರಡು ಪಾರಿವಾಳಗಳು. ಹಾಗೆಯೇ 'ದೊಡ್ಡವರ ನಾಯಿ', 'ಒಂದು ಸಹಜ ಸಾವು' ಇವತ್ತಿನ ರಾಜಕೀಯ, ಸಾಮಾಜಿಕ ಕಲುಷಿತ ಮನಸುಗಳ ಬಗ್ಗೆ ವಿಷಾದ ಮೂಡಿಸುವ ಜೊತೆಗೆ ನಾವೆತ್ತ ಸಾಗಬೇಕು ಎಂಬ ಸೂಕ್ಷ್ಮಗ್ರಹಿಕೆಯನ್ನು ಕಥಾ ಹಿನ್ನೆಲೆಯಲ್ಲಿ ಅಂಗೈ ಗೆರೆಗಳಂತೆ ತೋರಿಸುತ್ತದೆ. ಕೊನೆಯ ಚಿಕ್ಕ ಕಥೆ ಕಥೆಗಾರನೊಂದಿಗೆ ಸುತ್ತ ಮುಸುಕಿರುವ ಕತ್ತಲೆ ನಡೆಸಿರುವ ಸಂವಾದವಿದೆ. ನನ್ನಂತವನಲ್ಲಿರಬಹುದಾದ ಹಮ್ಮು ಬಿಮ್ಮುಗಳನ್ನು ಮುಕ್ತವಾಗಿ ಕತ್ತಲೆ ಪ್ರಶ್ನಿಸಿದೆ. ಹೀಗೆ ಏನೇ ಹೇಳಿದರೂ 'ಕಥಾ ಸಂಕಲನ' ಓದುವ, ಮುಕ್ತವಾಗಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ನಿಮಗಲ್ಲದೆ ಮತ್ಯಾರಿಗಿದೆ ಹೇಳಿ? ಹಾಗೆ ನಿಮಗೆ ಅನ್ನಿಸಿದ್ದನ್ನು ನನಗೆ ನೇರವಾಗಿ ಹೇಳಿ ಇಲ್ಲಾ, ಮೇಲ್ ಮಾಡಿ. ತಪ್ಪದೇ ಓದಿ, ಮುಂದಿನ ದಿನಗಳಲ್ಲಿ ತಪ್ಪದೇ ಪಾಲಿಸುತ್ತೇನೆ. ಯಾಕೆ ಹೀಗೆಲ್ಲಾ ಹೇಳುತ್ತೇನೆ ಅಂದರೆ... ನಾನು ನಿಮ್ಮೆಲ್ಲರ ಪ್ರೀತಿ ಅಂಗೈಯಲ್ಲಿ ಅರಳಬೇಕಿದೆ. ಘಮಘಮಿಸಬೇಕಿದೆ. ಇದರೊಂದಿಗೆ ಆಮಂತ್ರಣ ಪತ್ರಿಕೆ ಅಂಟಿಸಿರುವೆ. ಸಾಧ್ಯವಿದ್ದರೆ ಬನ್ನಿ. ಬಾರದಿದ್ದರೂ ಬೇಸರವಿಲ್ಲ. ಹೇಗೆ ಸಂಪಕರ್ಿಸಿದರೂ ನಾನಂತೂ ಅತೀವ ಖುಷಿ ಅನುಭವಿಸುತ್ತೇನೆ. ಗುಲ್ಬರ್ಗದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ, ನಿ. ತನ್ನ ಉದ್ಘಾಟನಾ ಸಮಾರಂಭ ಮತ್ತು ಪ್ರಕಾಶನದ ಮೊದಲ ಬಾರಿಗೆ ನನ್ನ 'ಮಾಮೂಲಿ ಗಾಂಧಿ' ಕಥಾ ಸಂಕಲನ ಸೇರಿದಂತೆ ಚಂದ್ರಕಾಂತ ಕುಸನೂರು ಅವರ 'ಸುರೇಖಾ ಮ್ಯಾಡಂ ಎಂಬ ನಾಟಕ, ಡಾ.ಪ್ರಭು ಖಾನಾಪುರೆ ಬರೆದ 'ದೃಷ್ಟಿ' ಕವನ ಸಂಕಲನ ಮತ್ತು ಸಹ ಕಥೆಗಾತರ್ಿ ಕಾವ್ಯಶ್ರೀ ಮಹಾಗಾಂವಕರ್ ಬರೆದ 'ಬೆಳಕಿನೆಡೆಗೆ' ಕಥಾ ಸಂಕಲನ ಬಿಡುಗಡೆಗೊಳ್ಳುತ್ತಿವೆ. ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪ ಹತ್ತಿರದ ಶ್ರೀ ರೇಣುಕಾಆರ್ಯ ಕಲ್ಯಾಣ ಮಂಟಪದಲ್ಲಿ ಪುಸ್ತಕಗಳ ಬಿಡುಗಡೆ. ಬೆಳಿಗ್ಗೆ 10ಕ್ಕೆ. ತಪ್ಪದೇ ಬನ್ನಿ. ಅಂದ ಹಾಗೆ ಸಂಸದ ಕೆ.ಬಿ.ಶಾಣಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ, ಡಾ.ಮಲ್ಲೇಪುರಂ ಜಿ.ವೆಂಕಟೇಶ ಪುಸ್ತಕಗಳನ್ನು ಬಿಡುಗಡೆಮಾಡುವರು. ಗುವಿಗು ಕುಲಪತಿ ಡಾ.ಬಿ.ಜಿ.ಮೂಲಿಮನಿ ಅಧ್ಯಕ್ಷತೆವಹಿಸುವರು. ಡಾ.ಸ್ವಾಮಿರಾವ್ ಕುಲಕಣರ್ಿ ಪುಸ್ತಕಗಳನ್ನು ಪರಿಚಯಿಸುವರು. ಕನ್ನಡನಾಡು ಲೇಖಕರ ಬಳಗದ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಮತ್ತು ಉಪಾಧ್ಯಕ್ಷ ಡಾ.ಡಿ.ಬಿ.ನಾಯಕ ಅವರು ಸೇರಿದಂತೆ ನೀವೂ ಇರುತ್ತೀರಿ ಎಂದೇ ತಿಳಿದಿದ್ದೇನೆ.
ತಪ್ಪದೇ ಸಂಪಕರ್ಿಸಿ, ಕಥಾ ಸಂಕಲನ ಓದಿ ಬೆನ್ತಟ್ಟಿ...
ನಿಮ್ಮ ಪ್ರೀತಿಯ ಬಯಸುತ್ತಾ...
ಕಲಿಗಣನಾಥ ಗುಡದೂರು
ಸಂಪರ್ಕ



ಕಲಿಗಣನಾಥ ಗುಡದೂರುಇಂಗ್ಲಿಷ್ ಉಪನ್ಯಾಸಕಸಂಕೇತ ಪಿ.ಯು.ಕಾಲೇಜ್,ಸಿಂಧನೂರು-೫೮೪೧೨೮



ಜಿಲ್ಲೆ: ರಾಯಚೂರುಮೊ: 9916051329